ಬೆಂಗಳೂರು: ‘ಕಾರ್ಖಾನೆಗಳಿಗೆ ಕಬ್ಬಿಣದ ಅದಿರು ಸಾಗಿಸುವ ಟಿಪ್ಪರ್ ಲಾರಿಗಳಿಗೆಗಣಿ ಮತ್ತು ಭೂವಿಜ್ಞಾನ ಇಲಾಖೆ ನೀಡುವ ಪರವಾನಗಿ ಅವಧಿಯನ್ನು 24 ಗಂಟೆಗಳಿಗೆ ವಿಸ್ತರಿಸಬೇಕು’ ಎಂದು ಸಂಡೂರು ತಾಲ್ಲೂಕು ಗಣಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜೆ.ಬಾಬು ನಾಯ್ಕ್ ಆಗ್ರಹಿಸಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದ ಹಲವೆಡೆ ಗಣಿ ಕೆಲಸ ನಡೆಯುತ್ತಿದೆ. ಈಗಿರುವ ನಿಯಮದ ಪ್ರಕಾರ ಗಣಿಗಳಲ್ಲಿಟಿಪ್ಪರ್ ವಾಹನಗಳು ಲೋಡ್ ಮಾಡಿಕೊಂಡ ನಂತರ, ಆರು ಗಂಟೆಗಳ ಒಳಗೆ ಸಂಬಂಧಿಸಿದ ಕಾರ್ಖಾನೆಗಳಿಗೆ ತಲುಪಬೇಕಾಗಿವೆ. ಈ ಕಡಿಮೆ ಅವಧಿಯೊಳಗೆ ಸ್ಥಳ ಸೇರಲು ಚಾಲಕರಿಗೆ ಸಮಸ್ಯೆಯಾಗಿದೆ. ಪರವಾನಗಿ ಅವಧಿಯನ್ನು 6 ಗಂಟೆಯಿಂದ 24 ಗಂಟೆಗಳವರೆಗೆ ವಿಸ್ತರಿಸಬೇಕು’ ಎಂದರು.
‘ಲಾರಿಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿದರೆ ಅಥವಾ ರಿಪೇರಿಯಾದರೆ ಅದಿರು ಖರೀದಿದಾರರು ನೇರವಾಗಿ ಹೊಣೆ ಹೊರಬೇಕು. ಕಾರಣಾಂತರಗಳಿಂದ ಲಾರಿಗಳು ತಲುಪುವುದು ವಿಳಂಬವಾದಲ್ಲಿ, ಪರವಾನಗಿ ದಂಡ ಪಾವತಿಸಿ ವಾಹನವನ್ನೂ ಬಿಡಿಸಬೇಕು’ ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.