ಬೆಂಗಳೂರು: ‘ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದರಿಂದಾಗಿ ಕಾನ್ಸ್ಟೆಬಲ್ ಹುದ್ದೆಗೆ ನೇಮಕಗೊಂಡ ವ್ಯಕ್ತಿ ಡಿವೈಎಸ್ಪಿಯಾಗಿ ನಿವೃತ್ತಿಯಾಗಬಹುದು ಎಂದು ನಾನು ನೀಡಿದ್ದ ಹೇಳಿಕೆಯನ್ನು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ತಿರುಚಿದ್ದಾರೆ’ ಎಂದು ವಿಧಾನಪರಿಷತ್ತಿನ ಸದಸ್ಯ ಬಾಬುರಾವ್ ಚಿಂಚನಸೂರ ಹೇಳಿದ್ದಾರೆ.
‘ಖಾಲಿ ಪೇಪರ್ನಲ್ಲಿ ಡಿವೈಎಸ್ಪಿಯಾಗಿ ಆಗಬಹುದೆಂದು ನಾನು ಹೇಳಿದ್ದಾಗಿ ಪ್ರಿಯಾಂಕ್ ತಿರುಚಿದ್ದಾರೆ. ನನ್ನ ಹೇಳಿಕೆಯನ್ನು ಅವರು ಮತ್ತೊಮ್ಮೆ ಕಣ್ತೆರೆದು ನೋಡಲಿ’ ಎಂದು ಅವರು ಆಗ್ರಹಿಸಿದ್ದಾರೆ.
‘ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿಯನ್ನು ಹೆಚ್ಚಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿರಲಿಲ್ಲ. ಶ್ರೀರಾಮುಲು ಅವರ ಹೋರಾಟ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾಳಜಿ, ಬದ್ಧತೆಯಿಂದಾಗಿ ಮೀಸಲಾತಿ ಲಭಿಸಿದೆ. ನನ್ನ ಹೇಳಿಕೆಯನ್ನು ತಿರುಚುವ ಮೂಲಕ ಪ್ರಿಯಾಂಕ್ ತಮ್ಮ ನಿಜ ಬಣ್ಣ ತೋರಿಸಿದ್ದಾರೆ’ ಎಂದು ಚಿಂಚನಸೂರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.