ಬೆಂಗಳೂರು: ಹುಬ್ಬಳ್ಳಿಯಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು ಪಾಕಿಸ್ತಾನ್ ಜಿಂದಾಬಾದ್ ಎಂದಿರುವುದು, ಇದೀಗ ಸಿಎಎ, ಎನ್ಆರ್ಸಿ ವಿರೋಧಿಸಿ ನಡೆದ ಬಹಿರಂಗ ಸಭೆಯಲ್ಲಿ ಯುವತಿಯೊಬ್ಬಳು ಪಾಕ್ ಪರ ಘೋಷಣೆ ಕೂಗಿರುವುದನ್ನು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಖಂಡಿಸಿದ್ದಾರೆ.
‘ಮಂಗಳೂರು ವಿಮಾನ ನಿಲ್ದಾಣದಲ್ಲಿ ಆದಿತ್ಯರಾವ್ ಬಾಂಬ್ಇಟ್ಟಿದ್ದು, ಅಮೂಲ್ಯಾ ಲಿಯೋನ್ ಎಂಬಾಕೆ ಪಾಕ್ ಪರ ಘೋಷಣೆ ಕೂಗಿರುವುದನ್ನು ಗಮನಿಸಿದರೆ ದೇಶದಲ್ಲಿ ನಡೆಯುತ್ತಿರುವ ಅನಾರೋಗ್ಯಕರ ಬೆಳವಣಿಗೆಗಳ ಸಂಕೇತ ಪ್ರವೃತ್ತಿಗಳಾಗಿವೆ. ಇಂತಹ ದೇಶ ವಿರೋಧಿ ಕೃತ್ಯಗಳನ್ನು ಖಂಡಿಸಬೇಕಾಗಿದೆ’ ಎಂದರು.
ಪೌರತ್ವದ ಪ್ರಶ್ನೆ ಕೇವಲ ಮುಸ್ಲಿಮರ ಸಮಸ್ಯೆ ಎಂಬಂತೆ ಬಿಂಬಿತವಾಗುತ್ತಿರುವುದನ್ನು ಅಲ್ಲಗಳೆಯುವ ವಿವೇಕವನ್ನೂ ಬೆಳೆಸಿಕೊಳ್ಳಬೇಕು. ಸಿಎಎ,ಎನ್ಆರ್ಸಿಯಿಂದ ಹಿಂದೂಗಳೂ ಅತಂತ್ರರಾಗುವ ವಾಸ್ತವವನ್ನು ತಿಳಿಸಬೇಕು. ಅಸ್ಸಾಂನಲ್ಲಿ ಅತಂತ್ರರಾದ 19 ಲಕ್ಷ ಜನರಲ್ಲಿ 14 ಲಕ್ಷ ಹಿಂದೂಗಳಿದ್ದರೆ, ಶ್ರೀಲಂಕಾದಿಂದ ಬಂದ 72 ಸಾವಿರ ಜನರು ನಿರಾಶ್ರಿತ ಕೇಂದ್ರಗಳಲ್ಲಿದ್ದು, ಇವರೆಲ್ಲ ಪೌರತ್ವ ವಂಚಿತರಾಗುವ ಅಪಾಯವಿದೆ. ಟಿಬೆಟ್ನಿಂದ ಬಂದ 1.50 ಲಕ್ಷ ಜನರಿಗೂ ಇದೇ ಗತಿಯಾಗುತ್ತದೆ. ಹೊರಗಿನಿಂದ ಬಂದ ಮುಸ್ಲಿಮರು, ಹಿಂದೂ, ಬೌದ್ಧರಿಗೂ ಸಮಸ್ಯೆಯಾಗಲಿದೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.