ಬೆಂಗಳೂರು: ‘ಬಾಲ್ಯದಲ್ಲಿಯೂ ಗುಣಮಟ್ಟದ ಶಿಕ್ಷಣ ನೀಡಬೇಕಿರುವುದು ಇಂದಿನ ಅಗತ್ಯ’ ಎಂದು ಕ್ರೀಡೋ ಅರ್ಲಿ ಚೈಲ್ಡ್ ಹುಡ್ ಸೆಲ್ಯೂಷನ್ಸ್ ಸಂಸ್ಥೆಯ ನಿರ್ದೇಶಕಿ ಮೃದುಲಾ ಶ್ರೀಧರ್ ಹೇಳಿದರು.
ಸಂಸ್ಥೆಯ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಣ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗುಣಮಟ್ಟದ ಶಿಕ್ಷಣ ಎಂಬುದು ಐಷಾರಾಮಿ ಸರಕು ಅಲ್ಲ. ಇದು ಎಲ್ಲ ಮಕ್ಕಳ ಅಗತ್ಯವಾದ ಅಂಶ. ಇದು ಮಕ್ಕಳ ಚಿಂತನೆ, ಆತ್ಮವಿಶ್ವಾಸ, ಸಂವಹನ ಹಾಗೂ ವ್ಯಕ್ತಿತ್ವ ವಿಕಸನದ ಮೇಲೆ ಪ್ರಭಾವ ಬೀರುತ್ತದೆ. ಉತ್ತಮ ಬೋಧನಾ ಕೌಶಲಗಳನ್ನು ಹೊಂದಿರುವ ಶಿಕ್ಷಕರು ಮತ್ತು ಉತ್ತಮ ಶಾಲೆಗಳೊಂದಿಗೆ ಪಾಲುದಾರಿಕೆ ಹೊಂದುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಸಂಸ್ಥೆ ಶ್ರಮಿಸುತ್ತಿದೆ’ ಎಂದು ಅವರು ತಿಳಿಸಿದರು.
‘ದೇಶದಲ್ಲಿನ ಆಯ್ದ ಖಾಸಗಿ ಶಾಲೆಗಳಲ್ಲಿ ನಮ್ಮ ಸಂಸ್ಥೆಯ ಯೋಜನೆಗಳನ್ನು ಕಾರ್ಯಗತಗೊಳಿಸುತ್ತೇವೆ’ ಎಂದರು.
‘ಬಾಲ್ಯದಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಆಯಾ ಖಾಸಗಿ ಶಾಲೆಗಳ ಮಾಲೀಕರು ಮತ್ತು ಮಕ್ಕಳ ಪೋಷಕರ ಪಾತ್ರ ಮಹತ್ವದ್ದು’ ಎಂದು ಹೇಳಿದರು.
2ರಿಂದ 6 ವಯಸ್ಸಿನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಗುರಿ ಹೊಂದಿರುವ ಶಿಕ್ಷಣ ತಜ್ಞರು ಹಾಗೂ ಸಂಸ್ಥೆಯ ಪಾಲುದಾರರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.