ಬೆಂಗಳೂರು: ಬೆಂಗಳೂರು ನಗರದ ಕೋವಿಡ್ ಉಸ್ತುವಾರಿಗಾಗಿಇಬ್ಬರು ಸಚಿವರ ‘ಮುಸುಕಿನ ಗುದ್ದಾಟ’ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ.
ಕೊರೊನಾ ಸೋಂಕಿನ ಆರಂಭದಲ್ಲಿ ಸರ್ಕಾರದ ಪರವಾಗಿ ಮಾಧ್ಯಮದವರೊಂದಿಗೆ ಯಾರು ಮಾತನಾಡಬೇಕು ಎಂಬ ಜಿಜ್ಞಾಸೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮತ್ತು ವೈದ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಧ್ಯೆ ನಡೆದಿತ್ತು. ಇಬ್ಬರೂ ಮಾತನಾಡಿ ಅಂಕಿ–ಅಂಶಗಳ ವ್ಯತ್ಯಾಸದಿಂದ ಹಲವು ಬಾರಿ ಸರ್ಕಾರವನ್ನು ಪೇಚಿಗೆ ಸಿಲುಕಿಸಿದ್ದರು. ಬಳಿಕ ಈ ಜವಾಬ್ದಾರಿಯನ್ನು ಎಸ್.ಸುರೇಶ್ಕುಮಾರ್ ಅವರಿಗೆ ವಹಿಸಲಾಗಿತ್ತು.
ಈಗ ಮತ್ತೆ ಅದೇ ಸ್ಥಿತಿ ನಿರ್ಮಾಣವಾಗಿದೆ. ಈಗ ಕಂದಾಯ ಸಚಿವ ಆರ್.ಅಶೋಕ ಮತ್ತು ಡಾ.ಸುಧಾಕರ್ ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ ಎಂಬ ಮಾತು ಬಿಜೆಪಿ ವಲಯದಲ್ಲಿ ಗಹನ ಚರ್ಚೆಗೆ ಕಾರವಾಗಿದೆ.
ಡಾ.ಸುಧಾಕರ್ ಅವರು ಕ್ವಾರಂಟೈನ್ಗೆ ಒಳಗಾದ ಸಂದರ್ಭದಲ್ಲಿ ಅದರ ಉಸ್ತುವಾರಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಶೋಕ ಅವರಿಗೆ ವಹಿಸಿದ್ದರು. ತಮಗೆ ವಹಿಸಿದ ಕಾರ್ಯವನ್ನು ಅಶೋಕ ಅತಿ ಉತ್ಸಾಹದಿಂದಲೇ ನಿರ್ವಹಿಸಿ
ದ್ದರು. ಆ ಜವಾಬ್ದಾರಿ ಕಾಯಂ ಎಂದು ಭಾವಿಸಿದ್ದರು ಎಂದು ಹೇಳಲಾಗಿದೆ.
ಇದೀಗ ಡಾ.ಸುಧಾಕರ್ ಕ್ವಾರಂಟೈನ್ ಮುಗಿಸಿ ಬಂದಿದ್ದು, ಮಂಗಳವಾರ ನಡೆದ ಖಾಸಗಿ ವೈದ್ಯಕೀಯ ಕಾಲೇಜುಗಳ ಸಭೆಯಲ್ಲಿ ಭಾಗವಹಿಸಿದ್ದರು. ಸಭೆ ಮುಗಿಯುತ್ತಿದ್ದಂತೆ ಸುಧಾಕರ್ ಅವರು ಸುದ್ದಿಗೋಷ್ಠಿ ನಡೆಸಿ ಸಭೆಯ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.