ರಾಜರಾಜೇಶ್ವರಿನಗರ: ‘ಕಬ್ಬನ್ ಉದ್ಯಾನದಲ್ಲಿರುವ ಗ್ರಂಥಾಲಯ ಕಟ್ಟಡದ ಮಾದರಿಯಲ್ಲಿ ಕ್ಷೇತ್ರದ 70 ಉದ್ಯಾನಗಳಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಿಸಿ, ಎಲ್ಲ ಮೂಲಸೌಲಭ್ಯ ಒದಗಿಸಲಾಗುವುದು’ ಎಂದು ಶಾಸಕ ಮುನಿರತ್ನ ತಿಳಿಸಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಮಲ್ಲತ್ತಹಳ್ಳಿ ಕೆರೆಯನ್ನು ಐತಿಹಾಸಿಕ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು. ನಿತ್ಯ 5 ರಿಂದ 8 ಸಾವಿರ ಪ್ರವಾಸಿಗರನ್ನು ಸೆಳೆಯುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. 40 ರಿಂದ 50 ದೇವಾಲಯಗಳ ಪುನರ್ ಜೀರ್ಣೋದ್ದಾರ ಕೈಗೆತ್ತಿಕೊಳ್ಳಲಾಗಿದೆ’ ಎಂದರು.
ಬಿಜೆಪಿ ಮುಖಂಡ ಬಿ.ಮೋಹನ್ ಕುಮಾರ್ ಮಾತನಾಡಿ, ‘ಕ್ಷೇತ್ರದಲ್ಲಿ ಉದ್ಯಾನ ಅಭಿವೃದ್ಧಿ, ಶುದ್ಧ ಕುಡಿಯುವ ನೀರು ಪೂರೈಕೆ, ಒಳಚರಂಡಿ, ಜಿಮ್ ಕೇಂದ್ರ ನಿರ್ಮಾಣ, ಉಚಿತ ನಿವೇಶನ, ಅಕ್ರಮ ಸಕ್ರಮ ಅಡಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ’ ಎಂದರು.
ಬಿಜೆಪಿ ನಾಯಕರಾದ ಮಂಜುನಾಥ್, ಮಾರುತಿ, ಕಾಳೆಗೌಡ, ಮಿಥುನ್ಲಿಂಗದಾಳ್, ಮುರಳಿಪ್ರೇಮ್, ದೀಪು, ರೂಪಿಣಿ, ರಜಿಯಾ, ಕೃಷ್ಣಮೂರ್ತಿ ನಗರಸಭೆ ಮಾಜಿ ಸದಸ್ಯರಾದ ಸುಮಿತ್ರಮ್ಮ, ಹನುಮೇಗೌಡ, ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎನ್.ಬಿ. ಉಮೇಶ್, ಸಹಾಯಕ ಎಂಜಿನಿಯರ್ ನವೀನ್, ಬೆಂಗಳೂರು ಜಲ ಮಂಡಳಿ ಕಾರ್ಯಪಾಲಕ ಎಂಜಿನಿಯರ್ ಸುಭಾಷ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಲ್ಪನಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.