ಬೆಂಗಳೂರು: ರೇಸ್ಕೋರ್ಸ್ ಅಂಗಳದಲ್ಲೇ ಸಾರ್ವಜನಿಕರಿಂದ ಹಣ ಕಟ್ಟಿಸಿಕೊಂಡು ಅಕ್ರಮವಾಗಿ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದಡಿ 11 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
‘ರಾಜಾನುಕುಂಟೆಯ ಗೌತಮ್ ಚಂದ್ (68), ಮಲ್ಲೇಶ್ವರದ ಮಂಜು (33), ಎಚ್. ಯೋಗೇಂದ್ರ (33), ರಿಚ್ಮಂಡ್ ಡೌನ್ನ ಅರ್ಶದ್ ಸುಕೂರ್ (55), ಲಗ್ಗೆರೆಯ ಟಿ.ಎಸ್. ಶಿವರುದ್ರೇಗೌಡ (30), ಚಂದ್ರಾಲೇಔಟ್ನ ಸಂತೋಷ್ (45), ಈಜಿಪುರದ ಅನಿಲ್ಕುಮಾರ್ (33), ಅವಲಹಳ್ಳಿಯ ಬಾಲಾಜಿ (44), ಹೊಸೂರು ರಸ್ತೆಯ ಕೃಷ್ಣ (68), ಶ್ರೀಗಂಧಕಾವಲ್ನ ಕೀರ್ತಿಕುಮಾರ್ (47) ಹಾಗೂ ನಾಗಶೆಟ್ಟಿಹಳ್ಳಿಯ ಸುರೇಶ್ (46) ಬಂಧಿತರು. ಅವರಿಂದ ₹ 2.56 ಲಕ್ಷ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರುಹೇಳಿದರು.
‘ರೇಸ್ಕೋರ್ಸ್ನಲ್ಲಿ ಶನಿವಾರ ಕುದುರೆ ಓಟದ ಸ್ಪರ್ಧೆ ಇತ್ತು. ಅದೇ ವೇಳೆ ಗೇಟ್ ನಂ.2ರ ಬಳಿ ನಿಂತಿದ್ದ ಆರೋಪಿಗಳು, ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದರು’
‘ಹಲವು ದಿನಗಳಿಂದ ನಡೆಯುತ್ತಿದ್ದ ಬೆಟ್ಟಿಂಗ್ ಬಗ್ಗೆ ಮಾಹಿತಿ ಬಂದಿತ್ತು. ವಿಶೇಷ ತಂಡ ರಚಿಸಿ, ಶನಿವಾರ ಕಾರ್ಯಾಚರಣೆ ನಡೆಸಲಾಯಿತು. 11 ಮಂದಿ ಸಿಕ್ಕಿಬಿದ್ದರು. ಇನ್ನೂ ಹಲವರು ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಇದೆ. ಅಕ್ರಮ ಬೆಟ್ಟಿಂಗ್ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದೂ ಸಿಸಿಬಿ ಪೊಲೀಸರುತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.