ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ‘ಸಿ’ ಹಾಗೂ ‘ಡಿ’ ದರ್ಜೆ ಕೆಲಸ ಕೊಡಿಸುವುದಾಗಿ ಹೇಳಿ ₹ 10 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ವಂಚನೆಗೀಡಾಗಿರುವ ಹುಬ್ಬಳ್ಳಿ ನಿವಾಸಿ ಅನಿಲ್ ಕುಮಾರ್ ದೂರು ನೀಡಿದ್ದಾರೆ. ಆರೋಪಿ ಎನ್ನಲಾದ ದಿಲೀಪ್ ಅಡಿವೆಪ್ಪ ಗಸ್ತಿ (40) ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಸ್ನೇಹಿತರೊಬ್ಬರ ಮೂಲಕ 2017ರಲ್ಲಿ ಅನಿಲ್ಕುಮಾರ್ ಅವರಿಗೆ ಆರೋಪಿ ದಿಲೀಪ್ ಪರಿಚಯವಾಗಿತ್ತು. ರೈಲ್ವೆ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು ನನಗೆ ಪರಿಚಯವೆಂದು ಹೇಳಿದ್ದ ಆರೋಪಿ, ₹ 10 ಲಕ್ಷ ಕೊಟ್ಟರೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದ. ಅದನ್ನು ನಂಬಿದ್ದ ಅನಿಲ್ಕುಮಾರ್, ಹಂತ ಹಂತವಾಗಿ ಆರೋಪಿಗೆ ಹಣ ನೀಡಿದ್ದರು’ ಎಂದೂ ತಿಳಿಸಿವೆ.
‘ಹಣ ಪಡೆದರೂ ಆರೋಪಿ ಕೆಲಸ ಕೊಡಿಸಿರಲಿಲ್ಲ. ಹಣವನ್ನೂ ವಾಪಸು ನೀಡಿರಲಿಲ್ಲ. ನೊಂದ ಅನಿಲ್ಕುಮಾರ್ ದೂರು ನೀಡಿದ್ದಾರೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.