
ಬೆಂಗಳೂರು: ರೈಲ್ವೆ ಸಂರಕ್ಷಣಾ ಪಡೆ (ಆರ್ಪಿಎಫ್) ಮತ್ತು ಬಚ್ಪನ್ ಬಚಾವೊ ಆಂದೋಲನ (ಬಿಬಿಎ) ವತಿಯಿಂದ ಸುರಕ್ಷಾ ಕ್ರಮಗಳ ಬಗ್ಗೆ ಮತ್ತು ರೈಲ್ವೆ ಹಳಿಗಳ ಸುತ್ತಲಿನ ನಿವಾಸಿಗಳ ಜವಾಬ್ದಾರಿ ಬಗ್ಗೆ ಹೆಬ್ಬಾಳ ರೈಲು ನಿಲ್ದಾಣದ ಬಳಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕೊಳೆಗೇರಿ ನಿವಾಸಿಗಳಲ್ಲಿ ಅರಿವು ಮೂಡಿಸುವುದು ಮತ್ತು ಅವರನ್ನು ತೊಡಗಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ 100ಕ್ಕೂ ಅಧಿಕ ನಿವಾಸಿಗಳು ಭಾಗವಹಿಸಿದ್ದರು. ರೈಲ್ವೆ ಹಳಿಗಳ ಬಳಿ ಅಸುರಕ್ಷಿತ ಅಭ್ಯಾಸಗಳಿಂದ ಅಪಾಯ ಉಂಟಾಗಲಿದೆ ಎಂದು ಅಧಿಕಾರಿಗಳು ತಿಳಿಸಿಕೊಟ್ಟರು.
ರೈಲುಗಳ ಮೇಲೆ ಕಲ್ಲು ತೂರಾಟ ಮಾಡುವುದು, ಹಳಿಗಳ ಮೇಲೆ ಕಸ ಎಸೆಯುವುದು, ವಸ್ತುಗಳನ್ನು ಇಡುವುದು ಮುಂತಾದ ಚಟುವಟಿಕೆಗಳ ದುಷ್ಪರಿಣಾಮದ ಬಗ್ಗೆ ತಿಳಿಸಿಕೊಡಲಾಯಿತು. ಸಂಗೀತದೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಸಂವಾದದ ಮೂಲಕ ಜಾಗೃತಿ ಮೂಡಿಸಲಾಯಿತು. ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆ ಕರಪತ್ರಗಳನ್ನು ವಿತರಿಸಲಾಯಿತು ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ತ್ರಿನೇತ್ರ ಕೆ.ಆರ್. ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.