ಚಾಮರಾಜನಗರ: ಜಿಲ್ಲೆಯಾದ್ಯಂತ ಎರಡನೇ ದಿನವೂ ಮಳೆ ಮುಂದುವರಿದಿದೆ. ಜಿಲ್ಲಾ ಕೇಂದ್ರ ಸೇರಿದಂತೆ ವಿವಿಧ ಕಡೆಗಳಲ್ಲಿ ಬುಧವಾರ ಸಂಜೆ 4.30ರ ನಂತರ ಸೋನೆ ಮಳೆ ನಿರಂತರವಾಗಿ ಸುರಿದಿದೆ.
ಮಂಗಳವಾರ ತಡರಾತ್ರಿವರೆಗೂ ಸುರಿದಿದ್ದ ಮಳೆ, ಬುಧವಾರ ಮಧ್ಯಾಹ್ನದವರೆಗೆ ಬಿಡುವು ಕೊಟ್ಟಿತ್ತು. ಆದರೂ ಮೋಡ ಕವಿದ ವಾತಾವರಣ ಇತ್ತು. ನಡುವೆ ತುಂತುರು ಮಳೆಯಾಗುತ್ತಿತ್ತು. ಶೀತಗಾಳಿ ಬೀಸುತ್ತಿದ್ದುದರಿಂದ ಜಿಲ್ಲೆಯಾದ್ಯಂತ ಇಡೀ ದಿನ ತಂಪಾದ ವಾತಾವರಣ ಇತ್ತು.
ಮಧ್ಯಾಹ್ನದ ನಂತರ ಮೋಡಗಳು ಮತ್ತಷ್ಟು ದಟ್ಟೈಸಲು ಆರಂಭಿಸಿದವು. 4.30ರ ನಂತರ ಮಳೆ ಹನಿಯಲು ಆರಂಭಿಸಿತು. ಜೋರಾಗಿಯೂ ಸುರಿಯದೆ, ಬಿಡುವೂ ನೀಡದೆ ನೀರ ಹನಿಗಳು ನಿರಂತರವಾಗಿ ಬೀಳುತ್ತಲೇ ಇದ್ದವು.
16 ಮಿ.ಮೀ ಮಳೆ: ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರದ ಅಂಕಿ ಅಂಶಗಳ ಪ್ರಕಾರ, ಮಂಗಳವಾರ ಜಿಲ್ಲೆಯಲ್ಲಿ 16 ಮಿ.ಮೀ ಮಳೆಯಾಗಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ 16 ಮಿ.ಮೀ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 25, ಕೊಳ್ಳೇಗಾಲ ತಾಲ್ಲೂಕಿನಲ್ಲಿ 12 ಮತ್ತು ಯಳಂದೂರು ತಾಲ್ಲೂಕಿನಲ್ಲಿ 21 ಮಿ.ಮೀ ಮಳೆಯಾಗಿದೆ.
ಆಗಸ್ಟ್ 1ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 21 ಮಿ.ಮೀ ಮಳೆ ಬಿದ್ದಿದೆ. ಸಾಮಾನ್ಯವಾಗಿ ಈ ಏಳು ದಿನಗಳಲ್ಲಿ 16 ಮಿ.ಮೀ ಮಳೆಯಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.