ADVERTISEMENT

ವರ್ತೂರು-ಪಣತ್ತೂರು ರಸ್ತೆ: ಭಾರಿ ಮಳೆಗೆ ರೈಲ್ವೆ ಕೆಳಸೇತುವೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 18:57 IST
Last Updated 21 ಆಗಸ್ಟ್ 2019, 18:57 IST
ನೀರಿನಲ್ಲಿ ಸಿಲುಕಿದ ವಾಹನ
ನೀರಿನಲ್ಲಿ ಸಿಲುಕಿದ ವಾಹನ   

ವೈಟ್‌ಫೀಲ್ಡ್: ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ವರ್ತೂರು-ಪಣತ್ತೂರು ರಸ್ತೆಯ ರೈಲ್ವೆ ಅಂಡರ್‌ಪಾಸ್ ಜಲಾವೃತವಾಗಿದ್ದು, ವಾಹನಗಳು ನೀರಿನಲ್ಲಿ ನಿಂತು ಕೆಟ್ಟು ಹೋಗಿವೆ.

ವರ್ತೂರಿನಿಂದ ಮಾರತ್ತಹಳ್ಳಿ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಅಂಡರ್‌ಪಾಸ್ ದುರಸ್ತಿಗಾಗಿ ಬಿ.ಎಸ್.ಯಡಿಯೂರಪ್ಪ ಅವರು ಎರಡು ವರ್ಷಗಳ ಹಿಂದೆ ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಇದೇ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದರು. ಇಷ್ಟಾದರೂ ಈವರೆಗೆ ದುರಸ್ತಿ ಕಾಮಗಾರಿ ನಡೆದಿಲ್ಲ. ಕೆಳಸೇತುವೆ ವಿಸ್ತರಣೆಗಾಗಿ ಹಲವು ಬಾರಿ ಪ್ರತಿಭಟನೆ ನಡೆದಿದ್ದರೂ ಈವರೆಗೂ ಕಾಮಗಾರಿ ಶುರುವಾಗಿಲ್ಲ.

ವರ್ತೂರಿನಿಂದ ಪಣತ್ತೂರು ಮೂಲಕ ಸಾಗುವ ದಾರಿಯಲ್ಲಿ ಈ ಕೆಳಸೇತುವೆ ಇದ್ದು, ಮಾರತಹಳ್ಳಿ ವರ್ತುಲ ರಸ್ತೆ ತಲುಪಲು ನಾಲ್ಕು ಕಿ.ಮೀ ತಗುಲುತ್ತದೆ. ಅದೇ ವರ್ತೂರು, ವರ್ತೂರು ಕೋಡಿ, ಕುಂದಲಹಳ್ಳಿ, ಮಾರತಹಳ್ಳಿ ಸೇತುವೆ ಮೂಲಕ ಮಾರತಹಳ್ಳಿ ವರ್ತುಲ ರಸ್ತೆ ತಲುಪಲು ಕನಿಷ್ಠ ಹತ್ತು ಕಿ.ಮೀ ಆಗುತ್ತದೆ. ಹೀಗಾಗಿ ವಾಹನ ಸವಾರರು ಈ ಅಂಡರ್‌ಪಾಸ್ ಅನ್ನೇ ಅವಲಂಬಿಸಿದ್ದಾರೆ.

ADVERTISEMENT

ಆದರೆ, ಮಳೆ ನೀರು ಸರಾಗವಾಗಿ ಹರಿದುಹೋಗಲು ವೈಜ್ಞಾನಿಕ ಕಾಲುವೆ ನಿರ್ಮಿಸದೆ ಇರುವುದರಿಂದ ಮಳೆ ಬಂದಾಗಲೆಲ್ಲ ಇಲ್ಲಿ ಮಿನಿ ಕೊಳ ಸೃಷ್ಟಿಯಾಗಿ ವಾಹನ ಸವಾರರು ಪರದಾಡುವುದು ಮಾಮೂಲಾಗಿದೆ. ಮಂಗಳವಾರ ರಾತ್ರಿ ಸುರಿದ ಮಳೆಯಿಂದ ವಾಹನಗಳೇ ಮುಳುಗಡೆಯಾಗಿವೆ. ಹೀಗಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.