ಬೆಂಗಳೂರು: ಮಂಗಳವಾರ ರಾತ್ರಿಯಿಡೀ ಆರ್ಭಟಿಸಿದ ಮಳೆಯಿಂದಾಗಿ ರಾಜಧಾನಿ ತತ್ತರಿಸಿ ಹೋಗಿದೆ. ಹಲವು ಬಡಾವಣೆಗಳು ಜಲಾವೃತಗೊಂಡಿವೆ.
ಮಂಗಳವಾರ ಸಂಜೆ ಆರಂಭವಾದ ಮಳೆ ರಾತ್ರಿಯಿಡಿ ಧಾರಾಕರವಾಗಿ ಸುರಿಯಿತು. ಮಧ್ಯಾಹವಾದರೂ ಮಳೆ ನೀರು ರಸ್ತೆಯಲ್ಲೇ ನಿಂತಿದ್ದರಿಂದ ವಾಹನಗಳ ಸವಾರರು ಪರದಾಡಿದರು. ಮನೆಗಳಿಗೂ ನೀರು ನುಗ್ಗಿದ್ದು, ನೀರು ಹೊರ ಹಾಕುವ ಕೆಲಸದಲ್ಲಿ ನಿರತರಾಗಿದ್ದರು.
ಶಿವಾನಂದ ವೃತ್ತದಲ್ಲಿ ರೈಲ್ವೆ ಸೇತುವೆ ಕೆಳಗೆ ನೀರು ಹೆಚ್ಚಾಗಿದ್ದರಿಂದ ಕಾರುಗಳು ನೀರಿನಲ್ಲಿ ಸಿಲುಕಿ ಸವಾರರು ಪರದಾಡಿದರು. ನಾಗರಬಾವಿ,ಮೆಜೆಸ್ಟಿಕ್, ಶಾಂತಿನಗರ, ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ಗಿರಿನಗರ, ಹೊಸಕೆರೆ ಹಳ್ಳಿ, ಇಂದಿರಾ ನಗರ, ಚಾಮರಾಜಪೇಟೆ, ಶ್ರೀರಾಂಪುರ, ರಾಜಾಜಿನಗರ, ಆರ್.ಆರ್. ನಗರ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ.
ನೆಲಮಂಗಲ, ಹೊರಮಾವು, ಎಚ್ಬಿಆರ್ ಲೇಔಟ್, ಸಹಕಾರ ನಗರ, ಚಿಕ್ಕಬಾಣಾವರ, ರಾಮಮೂರ್ತಿ ನಗರ, ಹೆಣ್ಣೂರು ಸುತ್ತಮುತ್ತಲ ಬಡಾವಣೆಗಳು ಜಲಾವೃತಗೊಂಡಿದ್ದು, ಮನೆಯ ಮುಂದೆ ನಿಲ್ಲಿಸಿದ್ದ ಕಾರು ಮತ್ತು ಬೈಕ್ಗಳು ನೀರಿನಲ್ಲಿ ಮುಳುಗಿ ಹೋಗಿವೆ. ಅಂಗಡಿ– ಮುಂಗಟ್ಟುಗಳಿಗೂ ನೀರು ನುಗ್ಗಿದ್ದು, ಅದನ್ನು ಹೊರ ತಗೆಯುವ ಕೆಲಸದಲ್ಲಿ ನಿವಾಸಿಗಳು ನಿರತರಾಗಿದ್ದಾರೆ.
ಹೊರಮಾವು ಕೆರೆ ಪಕ್ಕದ ಬಡಾವಣೆಯೊಳಗೆ ನೀರು ನುಗ್ಗಿದೆ. ನೀರು ಮನೆ ಸೇರಿದ್ದರಿಂದ ಇಲ್ಲಿನ ಜನ ರಾತ್ರಿಯಿಡಿ ಜಾಗರಣೆ ಮಾಡುವಂತಾಗಿತ್ತು.
ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.