ADVERTISEMENT

ತುಮಕೂರು ರಸ್ತೆಯ ಮೇಲ್ಸೇತುವೆಯಲ್ಲೂ ಮಳೆ ನೀರು; ವಾಹನ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2024, 16:29 IST
Last Updated 20 ಆಗಸ್ಟ್ 2024, 16:29 IST
ಜಾಲಹಳ್ಳಿ 'ನಮ್ಮ ಮೆಟ್ರೊ ಸ್ಟೇಷನ್‌' ಸಮೀಪ ಮೇಲ್ಸೇತುವೆಯಲ್ಲಿ ನಿಂತ ಮಳೆನೀರಿನಲ್ಲೇ ವಾಹನಗಳು ಸಾಗಿದವು
ಜಾಲಹಳ್ಳಿ 'ನಮ್ಮ ಮೆಟ್ರೊ ಸ್ಟೇಷನ್‌' ಸಮೀಪ ಮೇಲ್ಸೇತುವೆಯಲ್ಲಿ ನಿಂತ ಮಳೆನೀರಿನಲ್ಲೇ ವಾಹನಗಳು ಸಾಗಿದವು   

ಬೆಂಗಳೂರು: ಮಳೆನೀರು ರಸ್ತೆಯಲ್ಲೇ ನಿಂತಿದ್ದರಿಂದ ತುಮಕೂರು ರಸ್ತೆ ಹಾಗೂ ಹೆಬ್ಬಾಳದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನದಿಂದ ಸಂಜೆಯವರೆಗೂ ಸಂಚಾರ ದಟ್ಟಣೆ ಉಂಟಾಯಿತು.

ತುಮಕೂರು ರಸ್ತೆಯ ಮೇಲ್ಸೇತುವೆ ಮೇಲೆ ನೀರು ನಿಂತು ಹಲವು ಗಂಟೆ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಜಾಲಹಳ್ಳಿ ನಮ್ಮ ಮೆಟ್ರೊ ಸ್ಟೇಷನ್‌ ಸಮೀಪ ಮೇಲ್ಸೇತುವೆಯಲ್ಲಿ ಒಂದೆರಡು ಅಡಿ ನೀರು ನಿಂತಿತ್ತು.

ಹೆಬ್ಬಾಳ ಜಂಕ್ಷನ್‌, ಕೆಂಪಾಪುರ, ವೀರಣ್ಣಪಾಳ್ಯ ಜಂಕ್ಷನ್‌ ಸುತ್ತಮುತ್ತಲ ರಸ್ತೆಗಳಲ್ಲಿ ಮಳೆ ನೀರು ನಿಂತು ಸಂಚಾರ ಅಸ್ತವ್ಯಸ್ತವಾಯಿತು.

ADVERTISEMENT

ಬಾಗಲಗುಂಟೆಯಲ್ಲಿ 5 ಸೆಂ.ಮೀ, ಚೊಕ್ಕಸಂದ್ರದಲ್ಲಿ 4.3 ಸೆಂ.ಮೀ, ಶೆಟ್ಟಿಹಳ್ಳಿಯಲ್ಲಿ 2.8 ಸೆಂ.ಮೀ, ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ 2.7 ಸೆಂ.ಮೀ, ದೊಡ್ಡಬಿದರಕಲ್ಲಿನಲ್ಲಿ 2.4 ಸೆಂ.ಮೀ, ಕೊಡಿಗೆಹಳ್ಳಿ, ನಂದಿನಿ ಲೇಔಟ್‌ನಲ್ಲಿ ತಲಾ 2.3 ಸೆಂ.ಮೀ, ನಾಗಪುರದಲ್ಲಿ 1.7 ಸೆಂ.ಮೀ, ಹೇರೊಹಳ್ಳಿಯಲ್ಲಿ 1.2 ಸೆಂ.ಮೀ ಹಾಗೂ ರಾಜಾಜಿನಗರದ ಸುತ್ತಮುತ್ತ 1 ಸೆಂ.ಮೀ ಮಳೆಯಾಯಿತು.

ಸದಾಶಿವನಗರ ಪೊಲೀಸ್‌ ಠಾಣೆ ಸಮೀಪ ಬೃಹತ್‌ ಮರ ಬಿದ್ದಿದ್ದರಿಂದ ಕಾರು ಜಖಂಗೊಂಡಿತು.

ಕ್ರಮ: ‘ನಗರದಲ್ಲಿ 23 ಸ್ಥಳಗಳಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಆ ಸ್ಥಳಗಳನ್ನು ಸ್ವಚ್ಛ ಮಾಡಲಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಸುದ್ದಿಗಾರರಿಗೆ ತಿಳಿಸಿದರು.

‘ಜಲಮಂಡಳಿ, ಬಿಎಂಆರ್‌ಸಿಎಲ್‌, ಬಿಡಿಎ ಕಾಮಗಾರಿ ಕೈಗೊಂಡಿರುವ ಸ್ಥಳಗಳಲ್ಲಿ ಮಳೆ ನೀರು ನಿಲ್ಲುತ್ತಿದ್ದು, ನೀರು ಹರಿವಿಗೆ ಸ್ಥಳ ಮಾಡಿಕೊಡಲು ಅವರಿಗೆ ಸೂಚಿಸಲಾಗಿದೆ. ಸೆಪ್ಟೆಂಬರ್‌ ಅಂತ್ಯದವರೆಗೂ ನಗರದಲ್ಲಿ ಹೆಚ್ಚಿನ ಮಳೆಯಾಗಲಿದ್ದು, ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

ಜಾಲಹಳ್ಳಿ
ಹೆಬ್ಬಾಳ ಜಂಕ್ಷನ್‌ನಲ್ಲಿ ಮಳೆನೀರು ನಿಂತು ವಾಹನ ದಟ್ಟಣೆ ಉಂಟಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.