
ಬೆಂಗಳೂರು: ‘ಕಲ್ಟ್’ ಸಿನಿಮಾ ಪ್ರಚಾರದ ಬ್ಯಾನರ್ ತೆರವುಗೊಳಿಸಿದ್ದಕ್ಕೆ ಕುಪಿತಗೊಂಡು ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಮೊಬೈಲ್ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವಿಮೆನ್ (ಎನ್ಎಫ್ಐಡಬ್ಲ್ಯು) ಸರ್ಕಾರವನ್ನು ಆಗ್ರಹಿಸಿದೆ.
ಈ ಸಂಬಂಧ ಹೇಳಿಕೆ ನೀಡಿರುವ ಸಂಘಟನೆ ಅಧ್ಯಕ್ಷೆ ಎ. ಜ್ಯೋತಿ, ‘ಅಕ್ರಮಗಳನ್ನು ಪ್ರಶ್ನಿಸುವುದು ಅಧಿಕಾರಿಗಳ ಕರ್ತವ್ಯ. ಹೀಗೆ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಿರುವ ವಿಷಯಕ್ಕೆ ಅಧಿಕಾರಿಯನ್ನು ನಿಂದಿಸಿ, ಕಚೇರಿಗೆ ಬೆಂಕಿ ಹಚ್ಚಿ ದಂಗೆ ಎಬ್ಬಿಸುವುದಾಗಿ ಬೆದರಿಕೆ ಹಾಕಿರುವ ರಾಜೀವ್ ಗೌಡ ಕಾನೂನಿನ ಶಿಕ್ಷೆಗೆ ಅರ್ಹರು. ಸರ್ಕಾರ ಯಾವ ಮುಲಾಜಿಗೂ ಒಳಗಾಗದೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
‘ರಾಜೀವ್ ಗೌಡ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ. ಮಹಿಳಾ ಅಧಿಕಾರಿಯ ಮೇಲೆ ಇಷ್ಟೊಂದು ದರ್ಪ ತೋರುತ್ತಾರೆಂದರೆ, ಅವರೇನಾದರೂ ಶಾಸಕರಾಗಿ ಚುನಾಯಿತರಾಗಿದ್ದರೆ ಯಾವ ರೀತಿಯಲ್ಲಿ ರಾಜ್ಯದಲ್ಲಿ ದಬ್ಬಾಳಿಕೆ ತೋರುತ್ತಿದ್ದರು ಎನ್ನುವುದು ಅನೂಹ್ಯ. ಆದ್ದರಿಂದ ಕಾಂಗ್ರೆಸ್ ಪಕ್ಷದಿಂದ ಕೂಡಲೇ ಉಚ್ಛಾಟಿಸಬೇಕು’ ಎಂದು ಕಾರ್ಯದರ್ಶಿ ಕೆ.ರೇಣುಕಾ, ಉಪಾಧ್ಯಕ್ಷೆ ಪದ್ಮ ಪಾಟೀಲ, ಖಜಾಂಚಿ ವೈ.ಮಹಾದೇವಮ್ಮ, ಸಹ ಕಾರ್ಯದರ್ಶಿ ಪುಷ್ಪ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.