ಬೆಂಗಳೂರು: ‘ಸ್ತ್ರೀವಾದವು ವಾಸ್ತವ ಸಮಾಜದಲ್ಲಿ ಬದಲಾವಣೆ ತರುವ ಜತೆಗೆ ಲಿಂಗಾಧಾರಿತ ಅಸಮಾನತೆಯನ್ನು ಹೋಗಲಾಡಿಸಬೇಕು’ ಎಂದು ವಿಮರ್ಶಕ ರಾಜೇಂದ್ರ ಚೆನ್ನಿ ಹೇಳಿದರು.
ಜೀರುಂಡೆ ಪುಸ್ತಕ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಚ್.ಎಸ್. ಶ್ರೀಮತಿ ಅವರು ಕನ್ನಡಕ್ಕೆ ಅನುವಾದಿಸಿರುವ ‘ಬಾರಯ್ಯ ಮಮಬಂಧು’ ಪುಸ್ತಕ ಬಿಡುಗಡೆ ಮಾಡಿ, ಮಾತನಾಡಿದರು. ಬೆಲ್ ಹುಕ್ಸ್ ಈ ಕೃತಿಯ ಮೂಲ ಲೇಖಕರಾಗಿದ್ದಾರೆ.
‘ಪುರುಷ ಪ್ರಾಧಾನ್ಯ ವ್ಯವಸ್ಥೆಯು ಪುರುಷರ ಪ್ರಜ್ಞೆಯ ಮೇಲೆ ಮಾತ್ರ ಆಳ್ವಿಕೆ ಮಾಡದೆ, ಸ್ತ್ರೀಯರ ಪ್ರಜ್ಞೆಯ ಮೇಲೆಯೂ ಆಳ್ವಿಕೆ ಮಾಡುತ್ತದೆ. ಅದೇ ರೀತಿ, ಪಿತೃ ಪ್ರಾಧಾನ್ಯ ಎನ್ನುವುದು ಸ್ತ್ರೀಯರ ಜತೆಗೆ ಪುರುಷರನ್ನೂ ಹಿಂಸೆಗೆ ಒಳಪಡಿಸಿದೆ. ಎಲ್ಲ ಅನುಕೂಲಗಳನ್ನು ಪಡೆದ ಪುರುಷರನ್ನೂ ಅಂಗವಿಕಲರನ್ನಾಗಿ ಮಾಡಿದೆ ಎನ್ನುವುದನ್ನು ಈ ಕೃತಿ ಸಾರಿದೆ’ ಎಂದು ಹೇಳಿದರು.
ಪ್ರಾಧ್ಯಾಪಕಿ ಸಬಿತಾ ಬನ್ನಾಡಿ, ‘ಹೆಣ್ಣು ತಾನು ಒಪ್ಪಿಕೊಂಡಂತಹ ಪುರುಷ ಪ್ರಧಾನತೆ, ದೌರ್ಜನ್ಯವನ್ನು ಅನುಭವಿಸಿದ ಬಳಿಕ ಅದನ್ನು ದಾಟಿಸುವ ಕೆಲಸ ಮಾಡುತ್ತಿದ್ದಾಳೆ. ಹಾಗೇ ಮಾಡಿಸುವುದೇ ಪಿತೃ ಪ್ರಧಾನತೆ. ಅದರ ಅರಿವು ಅವಳಿಗೆ ಆಗುವುದಿಲ್ಲ. ಇದರಿಂದಾಗಿ ಹೆಣ್ಣಿನ ಮೇಲಿನ ದೌರ್ಜನ್ಯ ಕೊನೆಗೊಳ್ಳುವುದೇ ಇಲ್ಲ. ಇದನ್ನು ಬೆಲ್ ಹುಕ್ಸ್ ತನ್ನ ಕೃತಿಯಲ್ಲಿ ಹೇಳಿಕೊಂಡಿದ್ದಾಳೆ’ ಎಂದು ತಿಳಿಸಿದರು.
ಲೇಖಕಿ ಎಚ್.ಎಸ್. ಶ್ರೀಮತಿ, ‘ಶಿಕ್ಷಿತರು, ನಗರ ಪ್ರದೇಶದವರು, ವಿದೇಶದಲ್ಲಿ ಇರುವವರು ಸೇರಿ ಎಲ್ಲ ಹೆಂಗಸರ ಕಥೆಗಳೂ ಒಂದೇ ರೀತಿಯದ್ದಾಗಿರುತ್ತವೆ. ಪಿತೃ ಪ್ರಧಾನತೆಯು ನಮ್ಮ ಮನಸ್ಸು, ಬುದ್ದಿ, ದೇಹ ಹಾಗೂ ಜೀವನ ಕ್ರಮವನ್ನು ತನ್ನ ತಂತ್ರಗಾರಿಕೆಯಲ್ಲಿ ಪಳಗಿಸಿಟ್ಟಿದೆ. ಹುಟ್ಟಿದ ತಕ್ಷಣವೇ ಹೆಣ್ಣು, ಗಂಡು ಹೇಗಿರಬೇಕೆಂದು ಹೇಳಲಾಗುತ್ತದೆ. ನಾವು ಈ ಕಲಿಕೆಯನ್ನು ಮರೆಯಬೇಕು. ಆಗ ನಾವು ಯಾರೆಂದು ಗುರುತಿಸಿಕೊಳ್ಳುತ್ತೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.