ADVERTISEMENT

ರಾಜ್ಯೋತ್ಸವಕ್ಕೆ ಸಾಮೂಹಿಕ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 16:58 IST
Last Updated 1 ನವೆಂಬರ್ 2020, 16:58 IST
ಹಲಸೂರು ವಾರ್ಡ್‌ನಲ್ಲಿ ಭಾನುವಾರ ನಡೆದ ಸಾವಯವ ಸಂತೆಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಗೊಬ್ಬರ ತಯಾರಿಸಲು ಬಳಸುವ ಮಡಕೆಯನ್ನು ಮಂಜುನಾಥ ಪ್ರಸಾದ್‌ ಹಾಗೂ ಗೌರವ್‌ ಗುಪ್ತ ಪರಿಶೀಲಿಸಿದರು
ಹಲಸೂರು ವಾರ್ಡ್‌ನಲ್ಲಿ ಭಾನುವಾರ ನಡೆದ ಸಾವಯವ ಸಂತೆಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಗೊಬ್ಬರ ತಯಾರಿಸಲು ಬಳಸುವ ಮಡಕೆಯನ್ನು ಮಂಜುನಾಥ ಪ್ರಸಾದ್‌ ಹಾಗೂ ಗೌರವ್‌ ಗುಪ್ತ ಪರಿಶೀಲಿಸಿದರು   

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಿಬಿಎಂಪಿ ವತಿಯಿಂದ ಎಲ್ಲಾ ವಾರ್ಡ್‌ಗಳಲ್ಲೂ ಭಾನುವಾರ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ ಆಚರಿಸಲಾಯಿತು.

ಹಲಸೂರು ಕೆರೆ ಸುತ್ತಮುತ್ತ ನಡೆದ ಸ್ವಚ್ಛತಾ ಕಾರ್ಯಕ್ಕೆ ಪಾಲಿಕೆಯ ಆಡಳಿತಾಧಿಕಾರಿ ಗೌರವ ಗುಪ್ತ ಹಾಗೂ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಚಾಲನೆ ನೀಡಿದರು.

ಪೌರಕಾರ್ಮಿಕರ ಕುಶಲೋಪರಿ ಆಲಿಸಿದ ಆಡಳಿತಾಧಿಕಾರಿ ಅವರಿಗೆ ಸುರಕ್ಷಾ ಸಾಮಗ್ರಿಗಳು, ರಸ್ತೆ ಗುಡಿಸಲು ಪೊರಕೆಗಳನ್ನು ಕಾಲ ಕಾಲಕ್ಕೆ ವಿತರಣೆ ಮಾಡುವಂತೆ ಸಲಹೆ ನೀಡಿದರು.

ADVERTISEMENT

ಅಣ್ಣಸ್ವಾಮಿ ಮೊದಲಿಯಾರ್ ರಸ್ತೆ ಹಾಗೂ ಹಲಸೂರು ಕೆರೆ ಸುತ್ತಮುತ್ತಲಿನ ಪ್ರದೇಶವನ್ನು ತಪಾಸಣೆ ನಡೆಸಿದ ಗೌರವ್‌ ಗುಪ್ತ, ‘ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಪಾದಚಾರಿ ಮಾರ್ಗ ಹಾಗೂ ರಸ್ತೆ ದುರಸ್ತಿ ಕಾರ್ಯ ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು ಹಾಗೂ ಮಾರ್ಗ ಬದಿಯ ಮಣ್ಣುಗುಡ್ಡೆಯನು ತೆರವು ಮಾಡಬೇಕು’ ಎಂದು ಸೂಚನೆ ನೀಡಿದರು.

ಕೆರೆ ಪಕ್ಕದಲ್ಲಿರುವ ರಾಜಕಾಲುವೆ ಯನ್ನೂ ಆಡಳಿತಾಧಿಕಾರಿ ಪರಿಶೀಲನೆ ನಡೆಸಿದರು. ‘ರಾಜಕಾಲುವೆಯ ಹೂಳು ತೆರವುಗೊಳಿಸಿ ನೀರು ಸರಾಗವಾಗಿ ಅರಿಯುವಂತೆ ನೋಡಿಕೊಳ್ಳಬೇಕು’ ಎಂದರು.

ಸಾವಯವ ಸಂತೆ: ಹಲಸೂರು ಕೆರೆ ಅಂಗಳದಲ್ಲಿ ಏರ್ಪಡಿಸಿದ್ದ ಸಾವಯವ ಸಂತೆಗೆ ಆಡಳಿತಾಧಿಕಾರಿ ಚಾಲನೆ ನೀಡಿದರು. ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸ ಹಾಗೂ ಎಲೆಗಳನ್ನು ಬಳಸಿ ಗೊಬ್ಬರ ತಯಾರಿಸುವ ಪ್ರಾತ್ಯಕ್ಷಿಕೆ ನೀಡಲಾಯಿತು. ಮರುಬಳಕೆ ಸಾಮಗ್ರಿಗಳು, ಗೊಬ್ಬರ ತಯಾರಿಸಲು ನೆರವಾಗುವ ತೆಂಗಿನ ನಾರಿನ ಪುಡಿ, ಮಡಕೆ, ತೆಂಗಿನ ನಾರಿನಲ್ಲಿ ತಯಾರಿಸಿರುವ ಚೀಲ, ಮ್ಯಾಟ್, ತಾರಸಿ ತೋಟಕ್ಕೆ ಬೆಳಸುವ ಪರಿಕರಗಳು, ಬಟ್ಟೆ ಚೀಲ ಮೊದಲಾದ ಪರಿಸರ ಸ್ನೇಹಿ ಪರಿಕರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಪೂರ್ವ ವಲಯ ಜಂಟಿ ಆಯುಕ್ತರಾದ ಪಲ್ಲವಿ, ಹಲಸೂರು ವಾರ್ಡ್‌ನ ನೋಡಲ್ ಅಧಿಕಾರಿ ಸರ್ಫರಾಜ್ ಖಾನ್, ಕೆರೆ ವಿಭಾಗದ ಮುಖ್ಯ ಎಂಜಿನಿಯರ್‌ ಮೋಹನ್ ಕೃಷ್ಣ, ಕಸ ವಿಲೇವಾರಿವಿಭಾಗದ ಮುಖ್ಯ ಎಂಜಿನಿಯರ್‌ ವಿಶ್ವನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.