ಬೆಂಗಳೂರು: ‘ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ವಾಲ್ಮೀಕಿ ಸಮುದಾಯಕ್ಕೆ ರೂಪಿಸಿರುವ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ವಿಜಯನಗರ ವಿಧಾನಸಭೆ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪಭಾನುವಾರ ಹೇಳಿದರು.
ರಾಜ್ಯ ವಾಲ್ಮೀಕಿ, ನಾಯಕ ಸಂಘಗಳ ಒಕ್ಕೂಟದ ರಾಜ್ಯ ಯುವ ಘಟಕ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಿಗಮದ ಯೋಜನೆಗಳ ಬಗ್ಗೆ ಎಷ್ಟು ಜನಕ್ಕೆ ಗೊತ್ತು? ಯಾರು ಪ್ರಯೋಜನ ಪಡೆದಿದ್ದೀರಾ’ ಎಂದು ಕೃಷ್ಣಪ್ಪ ಅವರು ಪ್ರಶ್ನಿಸಿದಾಗ, ಸಭಾಂಗಣದಲ್ಲಿದ್ದವರು ‘ಗೊತ್ತಿಲ್ಲ, ಯಾವ ಪ್ರಯೋಜನವನ್ನು ಪಡೆದಿಲ್ಲ’ ಎಂದು ಹೇಳಿದರು.
‘ನಿಗಮದಲ್ಲಿ ವಿದ್ಯಾರ್ಥಿಗಳಿಗೆ ಹಲವು ರೀತಿಯ ಯೋಜನೆಗಳಿವೆ. ಅವುಗಳ ನೆರವು ಪಡೆಯಿರಿ. ಶಿಕ್ಷಣ ಮುಗಿಸಿದ ಮೇಲೂ ಸ್ವಯಂ ಉದ್ಯೋಗಕ್ಕೆ ಹಲವು ಯೋಜನೆಗಳಿವೆ. ಇವುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು’ ಎಂದು ಕೃಷ್ಣಪ್ಪ ತಿಳಿಸಿದರು.
‘ವಾಲ್ಮೀಕಿ, ನಾಯಕ ಸಂಘಗಳು ನಿಗಮದ ಯೋಜನೆಗಳನ್ನು ಸಮುದಾಯದ ಎಲ್ಲರಿಗೂ ತಿಳಿಸುವಂತಹ ಕಾರ್ಯಕ್ರಮ ರೂಪಿಸಬೇಕುಮತ್ತು ಸಮುದಾಯಕ್ಕೆ ತಲುಪಿಸುವ ಕಾರ್ಯಗಳನ್ನು ಕೈಗೊಳ್ಳಬೇಕು’ ಎಂದು ಹೇಳಿದರು.
ಹಲವು ಸಾಧಕರನ್ನು ಸನ್ಮಾನಿಸಲಾಯಿತು. ತುಮಕೂರಿನ ಶಿಡ್ಲಕೋಣದ ವಾಲ್ಮೀಕಿ ಮಹಾಸಂಸ್ಥಾನ ಮಠದ ಸಂಜಯಕುಮಾರ ಸ್ವಾಮೀಜಿ, ಒಕ್ಕೂಟದ ಅಧ್ಯಕ್ಷ ತಿಬ್ಬಣ್ಣ, ಹಿರಿಯ ಉಪಾಧ್ಯಕ್ಷ ದೇವರಾಜು, ಉಪಾಧ್ಯಕ್ಷ ನಾಗೇಶ್, ಮಹಾ ಪ್ರಧಾನ ಕಾರ್ಯದರ್ಶಿ ಎಂ.ರಾಮು, ಯುವಘಟಕದ ಅಧ್ಯಕ್ಷ ಎಂ.ಲಕ್ಷ್ಮಣನಾಯಕ, ಉಪಾಧ್ಯಕ್ಷರಾದ ರಾಚನಾಯಕ, ರಾಜೇಶ್ ನಾಯಕ, ಪ್ರಧಾನ ಕಾರ್ಯದರ್ಶಿ ಶ್ರೀಕಂಠಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.