ADVERTISEMENT

ರಾಮಾಶ್ರಮದಲ್ಲಿ ವೈಭವದ ಶ್ರೀರಾಮ ಪಟ್ಟಾಭಿಷೇಕ

ರಾಮನ ಆದರ್ಶ ಪಾಲಿಸಿ: ರಾಘವೇಶ್ವರ ಭಾರತಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 22:38 IST
Last Updated 7 ಆಗಸ್ಟ್ 2021, 22:38 IST
ರಾಮ ಮತ್ತು ಸೀತೆಯ ಮೂರ್ತಿಗಳಿಗೆ ರಾಘವೇಶ್ವರ ಭಾರತಿ ಸ್ವಾಮೀಜಿ ಪೂಜೆ ಸಲ್ಲಿಸಿದರು.
ರಾಮ ಮತ್ತು ಸೀತೆಯ ಮೂರ್ತಿಗಳಿಗೆ ರಾಘವೇಶ್ವರ ಭಾರತಿ ಸ್ವಾಮೀಜಿ ಪೂಜೆ ಸಲ್ಲಿಸಿದರು.   

ಬೆಂಗಳೂರು: ‘ರಾಮಾಯಣ ಪಾರಾಯಣದಿಂದ ಧಾರ್ಮಿಕ ವಾತಾವರಣ ನಿರ್ಮಾಣ ಸಾಧ್ಯವಾಗಲಿದೆ. ರಾಮಾಯಣದ ಸತ್ವ ಶಕ್ತಿಯೇ ಅಂತಹದ್ದು. ಅನೇಕ ಸನ್ನಿವೇಶಗಳು ಸ್ವತಃ ಅನುಭವಕ್ಕೆ ಬಂದಿವೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ತಿಳಿಸಿದರು.

ಗಿರಿನಗರದ ರಾಮಾಶ್ರಮದಲ್ಲಿ ‘ಶ್ರೀರಾಮಸಾಮ್ರಾಜ್ಯ ಪಟ್ಟಾಭಿಷೇಕ’ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ‘ಆಡಳಿತ ಎಂದೊಡನೆ ರಾಮರಾಜ್ಯದ ನೆನಪಾಗುತ್ತದೆ. ರಾಮನ ನಂತರ ಕೋಟ್ಯಾಂತರ ರಾಜರು ಆಳ್ವಿಕೆ ನಡೆಸಿದರು. ಆದರೆ, ಇಂದಿಗೂ ರಾಮರಾಜ್ಯಕ್ಕೆ ಸಾಟಿಯಿಲ್ಲ. ಹಾಗೆಯೇ, ರಾಮಾಯಣದ ನಂತರ ಕೋಟಿಗಟ್ಟಲೆ ಕಾವ್ಯಗಳು ರಚನೆಯಾಗಿವೆ. ಆದರೂ ರಾಮಾಯಣಕ್ಕೆ ಸಾಟಿಯಾಗಬಲ್ಲ ಮತ್ತೊಂದು ಕಾವ್ಯವಿಲ್ಲ. ರಾಮಾಯಣದ ಒಂದೊಂದು ಸರ್ಗ ಓದುತ್ತಾ ಹೋದಾಗ ಒಂದೊಂದು ಭಾವ ಹಾಗೂ ಸಾಕ್ಷಾತ್ಕಾರ ಪ್ರಾಪ್ತವಾಗುತ್ತದೆ’ ಎಂದರು.

‘ವಿಕೃತವಾದ ಮನಸ್ಸೇ ರಾವಣ. ಹತ್ತು ಇಂದ್ರಿಯಗಳೇ ರಾವಣನ ಹತ್ತು ತಲೆಗಳ ಪ್ರತೀಕ. ವಿವೇಕ ಎಂಬ ಬಾಣ ಪ್ರಯೋಗದಿಂದಷ್ಟೇ ಇದನ್ನು ನಿಗ್ರಹಿಸಿ, ರಾಮರಾಜ್ಯ ಸ್ಥಾಪಿಸಲು ಸಾಧ್ಯ’ ಎಂದು ಹೇಳಿದರು.

ADVERTISEMENT

ಸೀತಾರಾಮಚಂದ್ರನಿಗೆ ಸಾಮ್ರಾಜ್ಯ ಪಟ್ಟಾಭಿಷೇಕದ ವಿಧಿಗಳನ್ನು ನೆರವೇರಿಸಿದ ಅವರು, ವಿವಿಧ ಪುಣ್ಯನದಿಗಳ ಜಲ, ಧಾನ್ಯ, ಮಂಗಲ ದ್ರವ್ಯಗಳಿಂದ ಅಭಿಷೇಕ ಮಾಡಿ, ದೇವರಾಜೋಪಚಾರ ಪೂಜೆ ನೆರವೇರಿಸಿದರು. ಮಠದ ಶಾಖೆಗಳು, ಅಂಗಸಂಸ್ಥೆಗಳು, ಆಡಳಿತ ವ್ಯವಸ್ಥೆ ಹಾಗೂ ಶಿಷ್ಯ ಸಮುದಾಯ ರಾಮನಿಗೆ ಪಟ್ಟಕಾಣಿಕೆ ಸಲ್ಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.