ADVERTISEMENT

ಶೌಚಾಲಯ ಗಲಾಟೆ; ‘ಕಾಫಿ ಡೇ’ ವ್ಯವಸ್ಥಾಪಕನಿಗೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 21:03 IST
Last Updated 24 ನವೆಂಬರ್ 2020, 21:03 IST
   

ಬೆಂಗಳೂರು: ಶೌಚಾಲಯಕ್ಕೆ ಹೋಗಲು ಬಿಡಲಿಲ್ಲವೆಂಬ ಕಾರಣಕ್ಕೆ ‘ಕಾಫಿ ಡೇ’ ವ್ಯವಸ್ಥಾಪಕ ನವೀನ್‌ಕುಮಾರ್ ಎಂಬುವರ ಮೇಲೆ ಹಲ್ಲೆ ಮಾಡಲಾಗಿದ್ದು, ಈ ಸಂಬಂಧ ಆರೋಪಿ ಕಿರಣ್‌ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

‘ಹಲ್ಲೆಗೀಡಾಗಿರುವ ನವೀನ್‌ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ರಾಮಮೂರ್ತಿನಗರ ಠಾಣೆ ಪೊಲೀಸರು ಹೇಳಿದರು.

‘ಖಾಸಗಿ ಕಂಪನಿ ನೌಕರ ಕಿರಣ್‌ಕುಮಾರ್, ಸೋಮವಾರ ರಾತ್ರಿ ಕಸ್ತೂರಿನಗರದ ‘ಕಾಫಿ ಡೇ’ ಒಳಗೆ ಹೋಗಿ ಶೌಚಾಲಯದತ್ತ ತೆರಳುತ್ತಿದ್ದರು. ಅವರನ್ನು ತಡೆದಿದ್ದ ನವೀನ್‌ಕುಮಾರ್, ‘ಇದು ಸಾರ್ವಜನಿಕರ ಶೌಚಾಲಯವಲ್ಲ. ನಮ್ಮ ಗ್ರಾಹಕರಿಗಷ್ಟೇ ಇಲ್ಲಿ ಪ್ರವೇಶವಿದೆ. ನಿಮಗೆ ಪ್ರವೇಶವಿಲ್ಲ. ದಯವಿಟ್ಟು ಹೊರಟು ಹೋಗಿ’ ಎಂದಿದ್ದರು.

ADVERTISEMENT

‘ಶೌಚಾಲಯದ ವಿಷಯಕ್ಕೆ ಇಬ್ಬರ ನಡುವೆ ಗಲಾಟೆ ಆರಂಭವಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಅದೇ ಸಂದರ್ಭದಲ್ಲಿ ಆರೋಪಿ ಕಿರಣ್‌ಕುಮಾರ್, ತನ್ನ ಬಳಿಯ ಚೂಪಾದ ಆಯುಧದಿಂದ ನವೀನ್‌ಕುಮಾರ್ ಮೇಲೆ ಹಲ್ಲೆ ಮಾಡಿದ್ದರು. ಸಹಾಯಕ್ಕೆ ಬಂದ ಕೆಲಸಗಾರರು, ನವೀನ್‌ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಹೋದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.