ಬೆಂಗಳೂರು: ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಅಂಗವಾಗಿ ವೀರಣ್ಣ ಪಾಳ್ಯ ಮೇಲುಸೇತುವೆ ಕೆಳಭಾಗದಲ್ಲಿ ಭಾನುವಾರ ರಂಗೋಲಿ ಹಬ್ಬ ನಡೆಯಿತು.
ಪೌರಕಾರ್ಮಿಕರು, ನಾಗರಿಕರು, ಸಂಪರ್ಕ ಕಾರ್ಯಕರ್ತರು, ಸ್ವಯಂ ಸೇವಕರು ಸೇರಿ 100ಕ್ಕೂ ಹೆಚ್ಚು ಮಂದಿ ರಂಗೋಲಿ ಹಬ್ಬದಲ್ಲಿ ಪಾಲ್ಗೊಂಡು ವಿವಿಧ ಚಿತ್ತಾರದ ರಂಗೋಲಿಗಳನ್ನು ಬಿಡಿಸಿದರು. ಭಾಗವಹಿಸಿದ್ದ ಎಲ್ಲರಿಗೂ ಪ್ರಶಸ್ತಿ ಪತ್ರಗಳನ್ನು ಶಾಸಕ ಕೆ.ಜೆ.ಜಾರ್ಜ್, ಪಾಲಿಕೆ ವಿಶೇಷ ಆಯುಕ್ತ (ಕಸ ನಿರ್ವಹಣೆ) ಡಿ.ರಂದೀಪ್ ವಿತರಿಸಿದರು.
ಸ್ವಚ್ಛ ಸರ್ವೇಕ್ಷಣ್ ಅಭಿಯಾನ ಇನ್ನು 2 ತಿಂಗಳು ನಡೆಯಲಿದ್ದು, ಸ್ವಚ್ಛತೆಯಲ್ಲಿ ಉತ್ತಮ ಸ್ಥಾನ ಪಡೆಯಲು ಅನೇಕ ಕಾರ್ಯಕ್ರಮಗಳನ್ನು ಪಾಲಿಕೆ ರೂಪಿಸಿದೆ. ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೈಕ್ಲಥಾನ್, ಬೀದಿ ನಾಟಕ ಆಯೋಜನೆ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.
ಸ್ವಚ್ಛ ನಗರವನ್ನಾಗಿ ಮಾಡಲು ನಾಗರಿಕರ ಸಹಕಾರ ಅತೀ ಮುಖ್ಯ. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. 2020ರಲ್ಲಿ ಬಿಬಿಎಂಪಿಗೆ 214 ರ್ಯಾಂಕ್ ಬಂದಿದ್ದು, 2021ರಲ್ಲಿ ಉತ್ತಮ ರ್ಯಾಂಕ್ ಗಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು. .
ಸಾರ್ವಜನಿಕ ಸಹಭಾಗಿತ್ವ: ‘ಈ ಅಭಿಯಾನದಲ್ಲಿ ನಗರ ಉತ್ತಮ ರ್ಯಾಂಕ್ ಪಡೆಯಲು ನಾಗರಿಕರ ಪ್ರತಿಕ್ರಿಯೆ ಮುಖ್ಯ. ಈವರೆಗೆ 65,000 ನಾಗರಿಕರ ಪ್ರತಿಕ್ರಿಯೆ ಸಲ್ಲಿಸಿದ್ದಾರೆ. https://swachhsurvekshan2021.org/CitizenFeedback%2c ಲಿಂಕ್ ಮೂಲಕ ವೆಬ್ಸೈಟ್ನಲ್ಲಿ ನಾಗರಿರು ಪ್ರತಿಕ್ರಿಯೆ ಸಲ್ಲಿಸಬಹುದು’ ಎಂದು ಡಿ.ರಂದೀಪ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.