ಬೆಂಗಳೂರು: ಮನೆಗೆ ಹೋಗಲು ಆಟೊ ಹತ್ತಿದ್ದ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಲಾಗಿದ್ದು, ಈ ಸಂಬಂಧ ಆಟೊ ಚಾಲಕ ಮುಬಾರಕ್ (28) ಎಂಬಾತನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
‘ಡಿ. 11ರಂದು ಬೆಳಿಗ್ಗೆ ನಡೆದಿರುವ ಕೃತ್ಯದ ಸಂಬಂಧ 18 ವರ್ಷದ ಯುವತಿ ದೂರು ನೀಡಿದ್ದರು. ದೇವನಹಳ್ಳಿ ನಿವಾಸಿಯಾದ ಆರೋಪಿ ಮುಬಾರಕ್ನನ್ನು ಬಂಧಿಸಲಾಗಿದ್ದು, ಆತ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.
‘ಪಾಲಿಟೆಕ್ನಿಕ್ ವ್ಯಾಸಂಗ ಮಾಡುತ್ತಿರುವ ಯುವತಿ, ಬಿಡುವಿನ ವೇಳೆಯಲ್ಲಿ ಮದುವೆ ಸಮಾರಂಭಗಳಲ್ಲಿ ಸ್ವಾಗತಕಾರಿಣಿ ಆಗಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಡಿ. 10ರಂದು ಹೆಗಡೆನಗರದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಹೋಗಿ ಕೆಲಸ ಮಾಡಿದ್ದರು. ತಡರಾತ್ರಿಯಾಗಿದ್ದರಿಂದ ಕಲ್ಯಾಣ ಮಂಟಪದಲ್ಲೇ ಉಳಿದುಕೊಂಡಿದ್ದರು.’
‘ಮರುದಿನ ಬೆಳಿಗ್ಗೆ ಮನೆಗೆ ಹೋಗಲು ಸಿದ್ಧವಾಗಿದ್ದ ಯುವತಿ, ಥಣಿಸಂದ್ರ ಮುಖ್ಯರಸ್ತೆಗೆ ಬಂದು ಬಸ್ಸಿಗಾಗಿ ಕಾಯುತ್ತಿದ್ದರು. ಆಟೊದಲ್ಲಿ ಸ್ಥಳಕ್ಕೆ ಬಂದಿದ್ದ ಮುಬಾರಕ್, ಎಲ್ಲಿಗೆ ಹೋಗಬೇಕೆಂದು ಕೇಳಿದ್ದ. ನಾಗವಾರ ಕಡೆ ಹೋಗಬೇಕೆಂದು ಯುವತಿ ಹೇಳಿದ್ದರು. ಆ ಕಡೆಯೇ ಹೊರಟಿರುವುದಾಗಿ ಹೇಳಿದ್ದ ಆರೋಪಿ, ಯುವತಿಯನ್ನು ಹತ್ತಿಸಿಕೊಂಡಿದ್ದ’ ಎಂದೂ ಪೊಲೀಸರು ಹೇಳಿದರು.
‘ಯುವತಿ ಹೇಳಿದ್ದ ಸ್ಥಳದಲ್ಲಿ ಆಟೊ ನಿಲ್ಲಿಸದೇ ವೇಗವಾಗಿ ಚಲಾಯಿಸಿದ್ದ ಆರೋಪಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಅಲ್ಲಿಯೇ ಯುವತಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಈ ಸಂಗತಿ ಯುವತಿ ನೀಡಿದ್ದ ದೂರಿನಲ್ಲಿತ್ತು. ಆಟೊ ನೋಂದಣಿ ಸಂಖ್ಯೆ ಆಧರಿಸಿ ಚಾಲಕನನ್ನು ಸೆರೆ ಹಿಡಿಯಲಾಯಿತು’ ಎಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.