ಬೆಂಗಳೂರು: ಬಿಬಿಎಂಪಿಯ ಮಹತ್ವಾಕಾಂಕ್ಷೆಯ ‘ರ್ಯಾಪಿಡ್ ರಸ್ತೆ’ ಬಹುತೇಕ ಸಿದ್ಧಗೊಂಡಿದ್ದು, ಸಾರ್ವಜನಿಕರ ಬಳಕೆಗೆ ಮುಕ್ತವಾಗಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಿರೀಕ್ಷೆಯಲ್ಲಿದೆ.
ಹಳೆ ಮದ್ರಾಸ್ ರಸ್ತೆಯ ಹೊಸ ಬಿನ್ನಮಂಗಲವೃತ್ತದಲ್ಲಿ 500 ಮೀಟರ್ ರಸ್ತೆಯನ್ನು ‘ಪ್ರೀಕಾಸ್ಟ್ಪೋಸ್ಟ್ಟೆನ್ಷನಿಂಗ್ಕಾಂಕ್ರೀಟ್ ಪೇವ್ಮೆಂಟ್’ ತಂತ್ರಜ್ಞಾನದಿಂದ ‘ರ್ಯಾಪಿಡ್ ರಸ್ತೆ’ಯನ್ನು ಪ್ರಾಯೋಗಿಕವಾಗಿ ನಿರ್ಮಿಸಲಾಗಿದೆ. ಪ್ಯಾನಲ್ ಅಳವಡಿಕೆ ಕಾರ್ಯ ಐದು ದಿನದಲ್ಲಿ ಪೂರ್ಣಗೊಂಡಿದ್ದರೂ, ಕೇಬಲ್ ಸೌಲಭ್ಯ, ಫುಟ್ಪಾತ್ ನಿರ್ಮಾಣಕ್ಕೆ ಸಾಕಷ್ಟು ಸಮಯ ತೆಗೆದುಕೊಂಡಿದೆ.
ಡಿ.5ರ ಸೋಮವಾರ ಸಂಜೆಯೂ ರ್ಯಾಪ್ ಸೇರಿ ಕೆಲವು ಭಾಗಗಳಲ್ಲಿ ಕಾಂಕ್ರಿಟ್ ಹಾಕುವ ಕೆಲಸ ನಡೆಯುತ್ತಿತ್ತು. ಆದರೆ, ಕಾಂಕ್ರೀಟ್ ಲಾರಿಗಳನ್ನೂ ಒಳಗೊಂಡಂತೆ ಪ್ರಾಯೋಗಿಕವಾಗಿ ಭಾರಿ ವಾಹನಗಳು ಸಿದ್ಧವಾಗಿರುವ ‘ರ್ಯಾಪಿಡ್ ರಸ್ತೆ’ಯಲ್ಲಿ ಸಂಚರಿಸಿವೆ. ದೇಶದಲ್ಲಿ ಪ್ರಥಮವಾಗಿರುವ ಈ ರಸ್ತೆಯನ್ನು ಮುಖ್ಯಮಂತ್ರಿಯವರಿಂದ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಬಿಬಿಎಂಪಿ ಎಂಜಿನಿಯರ್ಗಳು ಕಾಯುತ್ತಿದ್ದಾರೆ.
‘ನಿರೀಕ್ಷೆಯಂತೆ ಕ್ಷಿಪ್ರವಾಗಿಯೇ ‘ರ್ಯಾಪಿಡ್ ರಸ್ತೆ’ಯನ್ನು ಮುಗಿಸಿದ್ದೇವೆ. ಕಾಂಕ್ರಿಟ್ ಹಾಕುವ ಭಾಗದಲ್ಲಿ ಪ್ಯಾನೆಲ್ ಅಳವಡಿಸುವ ಕಾರ್ಯ ಐದು ದಿನಗಳಲ್ಲಿ ಮುಗಿದಿದೆ. ಬೆಸ್ಕಾಂ ಸೇರಿ ಹಲವು ಕೇಬಲ್ಗಳನ್ನು ಅಳವಡಿಸಲು ನಿಧಾನವಾಗಿದೆ. ಫುಟ್ಪಾತ್ ನಿರ್ಮಾಣಕ್ಕೂ ಸಮಯ ತೆಗೆದುಕೊಂಡಿದೆ. ಮುಖ್ಯಮಂತ್ರಿಯವರು ಒಂದೆರಡು ದಿನದಲ್ಲಿ ರಸ್ತೆಗೆ ಚಾಲನೆ ನೀಡಲಿದ್ದಾರೆ’ ಎಂದು ಬಿಬಿಎಂಪಿಯ ಪ್ರಧಾನ ಎಂಜಿನಿಯರ್ ಪ್ರಹ್ಲಾದ್ ತಿಳಿಸಿದರು.
ವೈಟ್ ಟಾಪಿಂಗ್ ರಸ್ತೆಗಿಂತ ‘ರ್ಯಾಪಿಡ್ ರಸ್ತೆ’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಹಳೆ ಮದ್ರಾಸ್ ರಸ್ತೆಯನ್ನು ಪೂರ್ಣವಾಗಿಇದೇ ರೀತಿ ಅಭಿವೃದ್ಧಿಪಡಿಸುವ ಯೋಜನೆ ಇದೆ. ಅಲ್ಲದೆ, ನಗರದ ಇತರೆ ಭಾಗದಲ್ಲೂ ‘ರ್ಯಾಪಿಡ್ ರಸ್ತೆ’ ನಿರ್ಮಾಣವಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆದೇಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.