ಬೆಂಗಳೂರು: 14ನೇ ವಯಸ್ಸಿಗೂ ಮೊದಲೇ ಶಾಲೆ ತೊರೆಯುವ ಮಕ್ಕಳಿಗೆ ಆ ವಯಸ್ಸಿನಲ್ಲೇ ಕೌಶಲ ತರಬೇತಿ ನೀಡುವ ಅಗತ್ಯವಿದೆ ಎಂದು ಕೌಶಲ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ. ರತ್ನಪ್ರಭಾ ಅಭಿಪ್ರಾಯಪಟ್ಟರು.
ಕೌಶಲ ತರಬೇತಿಗೆ ಇರುವ ಅವಕಾಶಗಳು ಕುರಿತ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಗ್ರಾಮೀಣ ಭಾಗದಲ್ಲಿ ಹಲವು ಕಾರಣದಿಂದ ಮಕ್ಕಳು 10ನೇ ತರಗತಿಗೆ ಓದು ನಿಲ್ಲಿಸುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ಕೌಶಲ ತರಬೇತಿ ನೀಡಬೇಕೇ, ಬೇಡವೇ ಎಂಬುದು ಈಗಲೂ ಚರ್ಚಾ ವಿಷಯವೇ ಆಗಿದೆ. ಆದರೆ, ಅಂತಹ ಮಕ್ಕಳನ್ನು ಗುರುತಿಸಿ ಕೌಶಲ ತರಬೇತಿ ನೀಡಿದರೆ ಪರಿಣಾಮಕಾರಿಯಾಗಿ ಮಕ್ಕಳ ಭವಿಷ್ಯ ರೂಪಿಸಲು ನೆರವಾಗಲಿದೆ’ ಎಂದರು.
‘18 ವರ್ಷ ತುಂಬುವವರೆಗೂ ಅವರಿಗೆ ಪೂರ್ಣಾವಧಿ ಕೆಲಸಕ್ಕೆ ನೇಮಿಸುವ ಬದಲು, ಅಲ್ಪಾವಧಿ ಕೆಲಸ ಮಾಡಿಸುವುದರಿಂದ ಅವರ ವಯಸ್ಸಿನ ಮೇಲೆ ಯಾವುದೇ ಒತ್ತಡ ಬೀರಿದಂತಾಗುವುದಿಲ್ಲ. ಅಲ್ಲದೆ, ಅವರು ಪ್ರೌಢಾವಸ್ಥೆಗೆ ಬರುವುದರೊಳಗೆ ಆ ಮಕ್ಕಳ ಅನುಭವದ ಜೊತೆಗೆ ಕೌಶಲವನ್ನೂ ಮೈಗೂಡಿಸಿಕೊಳ್ಳಲಿದ್ದಾರೆ’ ಎಂದು ಹೇಳಿದರು.
ಸಂವಾದ ಹಾಗೂ ವಿಚಾರ ಗೋಷ್ಠಿಯಲ್ಲಿ 17ಕ್ಕೂ ಹೆಚ್ಚು ವಲಯದ ಕೌಶಲ ಸಮಾಲೋಚಕ ಸದಸ್ಯರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.