ADVERTISEMENT

ಉದ್ಯಮಿಗೆ ರವಿ ಪೂಜಾರಿ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 19:52 IST
Last Updated 30 ಜನವರಿ 2019, 19:52 IST

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ತಮಗೆ ನಿರಂತರವಾಗಿ ಕರೆಗಳು ಬರುತ್ತಿದ್ದು, ₹ 1.5 ಕೋಟಿ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಉದ್ಯಮಿಯೊಬ್ಬರು ವಿಜಯನಗರ ಠಾಣೆಗೆ ದೂರು ಕೊಟ್ಟಿದ್ದಾರೆ.

‘ಜ.12ರ ಬೆಳಿಗ್ಗೆ ಮೊದಲ ಸಲ ಆ ಸಂಖ್ಯೆಯಿಂದ ಕರೆ ಬಂದಿತ್ತು. ನಾನು ಸ್ವೀಕರಿಸಿರಲಿಲ್ಲ. ರಾತ್ರಿ 8 ಗಂಟೆಗೆ ಪುನಃ ಕರೆ ಬಂದಾಗ ಪತ್ನಿ ಮಾತನಾಡಿದ್ದಳು. ‘ನಾನು ಮಂಗಳೂರಿನ ಡಾನ್ ರವಿ ಪೂಜಾರಿ ಮಾತನಾಡುತ್ತಿದ್ದೇನೆ. ಯಾಕೆ ಕರೆ ಮಾಡಿದ್ದೇನೆ ಎಂಬುದು ಗೊತ್ತಿರಬೇಕಲ್ವ? ನೀವು ದೊಡ್ಡ ಬಿಸಿನೆಸ್‌ಮನ್ ಎಂದು ನನಗೆ ಗೊತ್ತು. 10 ದಿನಗಳ ಒಳಗಾಗಿ ₹ 1.5 ಕೋಟಿ ಕೊಡಬೇಕು. ನನ್ನ ಹುಡುಗರು ಮನೆ ಹತ್ತಿರ ಓಡಾಡುತ್ತಿದ್ದಾರೆ. ನನ್ನ ಮಾತನ್ನು ಲಘುವಾಗಿ ಪರಿಗಣಿಸಬೇಡಿ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದ’ ಎಂದುವಿನಾಯಕ ಲೇಔಟ್‌ನ ಕೆ.ಎನ್.ನಟರಾಜ್ ದೂರು ಕೊಟ್ಟಿದ್ದಾರೆ.

‘ಜ.26ರ ಹಾಗೂ ಜ.27ರಂದು ಪುನಃ ಆ ಸಂಖ್ಯೆಯಿಂದ ಕರೆಗಳು ಬಂದಿವೆ. ಇದರಿಂದ ನಮ್ಮ ಕುಟುಂಬ ಆತಂಕದಲ್ಲಿದೆ. ಆರೋಪಿಯನ್ನು ಪತ್ತೆ ಮಾಡಿ, ನಮಗೆ ರಕ್ಷಣೆ ನೀಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ. ವಿಜಯನಗರ ಪೊಲೀಸರು ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಆರೋಪಿಯ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.