ಬೆಂಗಳೂರು: ತಿಲಕನಗರ ಠಾಣೆ ವ್ಯಾಪ್ತಿಯ 'ಶಬನಂ ಬಿಲ್ಡರ್ಸ್' ಕಚೇರಿಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣ ಸಂಬಂಧ ಇಕ್ಬಾಲ್ ಖುರೇಷಿ (45) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
‘ಉತ್ತರ ಪ್ರದೇಶದ ಮುಜಾಫರ್ ನಗರದ ಇಕ್ಬಾಲ್ ಖುರೇಷಿ, ಅಕ್ರಮವಾಗಿ ಪಿಸ್ತೂಲ್ ಸರಬರಾಜು ಮಾಡುತ್ತಿದ್ದ. ರವಿ ಪೂಜಾರಿ ಜೊತೆ ಒಡನಾಟವಿಟ್ಟುಕೊಂಡಿದ್ದ. ಜೋಡಿ ಕೊಲೆ ಮಾಡಲು ರವಿ ಪೂಜಾರಿ ಸಹಚರರಿಗೆ ಇಕ್ಬಾಲ್ ಪಿಸ್ತೂಲ್ಗಳನ್ನು ಪೂರೈಸಿದ್ದ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.
‘2007ರ ಫೆ. 15ರಂದು ‘ಶಬನಂ ಬಿಲ್ಡರ್ಸ್’ ಕಚೇರಿ ಮೇಲೆ ದಾಳಿ ನಡೆಸಿದ್ದ ದುಷ್ಕರ್ಮಿಗಳು, ಉದ್ಯೋಗಿ ಶೈಲಜಾ ಹಾಗೂ ಕಾರು ಚಾಲಕ ರವಿ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಕೊಲೆ ನಂತರ ಸ್ಥಳದಿಂದ ಪರಾರಿಯಾಗುವ ವೇಳೆಯಲ್ಲಿ ‘ರವಿ ಪೂಜಾರಿ’ ಎಂಬ ಭಿತ್ತಿಪತ್ರವನ್ನು ಕಚೇರಿ ಗಾಜಿನ ಮೇಲೆ ಅಂಟಿಸಿ ಹೋಗಿದ್ದರು’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ಹೇಳಿದರು.
‘ಪ್ರಕರಣ ಸಂಬಂಧ ಇಕ್ಬಾಲ್ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿತ್ತು. ಜಾಮೀನು ಮೇಲೆ ಹೊರಬಂದಿದ್ದ ಇಕ್ಬಾಲ್ ತಲೆಮರೆಸಿಕೊಂಡಿದ್ದ. ನ್ಯಾಯಾಲಯಕ್ಕೂ ಹಾಜರಾಗುತ್ತಿರಲಿಲ್ಲ. 13 ವರ್ಷಗಳ ನಂತರ ಆತನನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದೂ ಹೇಳಿದರು.
ಮತ್ತುಷ್ಟು ಮಂದಿ ಶಾಮೀಲು: ‘ಸೆನೆಗಲ್ನಲ್ಲಿ ಸಿಕ್ಕಿಬಿದ್ದಿರುವ ರವಿ ಪೂಜಾರಿಯನ್ನು ನಿರಂತರವಾಗಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಜೋಡಿ ಕೊಲೆ ಸೇರಿದಂತೆ ಹಲವು ಕೃತ್ಯಗಳ ಬಗ್ಗೆ ಆತ ಬಾಯ್ಬಿಟ್ಟಿದ್ದಾನೆ’ ಎಂದು ಅಧಿಕಾರಿ ವಿವರಿಸಿದರು.
‘ಪಾಲಿಕೆ ಸದಸ್ಯರಾಗಿದ್ದ ಸಮೀವುಲ್ಲಾ ಅವರು ‘ಶಬನಂ ಬಿಲ್ಡರ್ಸ್’ ನಡೆಸುತ್ತಿದ್ದರು. ಅವರಿಗೆ ವಿದೇಶದಿಂದ ಬೆದರಿಕೆ ಕರೆ ಮಾಡಿದ್ದ ಪೂಜಾರಿ, ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ನೀಡಲು ಒಪ್ಪದಿದ್ದಾಗ ಕೊಲೆ ಮಾಡುವುದಾಗಿ ಬೆದರಿಸಿದ್ದ. ಆತನ ಸಹಚರರು ಮುಸುಕುಧಾರಿಗಳಾಗಿ ಕಚೇರಿ ಮೇಲೆ ದಾಳಿ ಮಾಡಿ ಶೈಲಜಾ ಹಾಗೂ ರವಿ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಈ ಕೃತ್ಯದಲ್ಲಿ ಹಲವರು ಶಾಮೀಲಾಗಿದ್ದಾರೆ. ಅವರೆಲ್ಲರನ್ನೂ ಪತ್ತೆ ಮಾಡಲಾಗುತ್ತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.