ADVERTISEMENT

ಶಿಕ್ಷಕರ ಸಂಘಕ್ಕೆ ಮರುಚುನಾವಣೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 18:47 IST
Last Updated 3 ಫೆಬ್ರುವರಿ 2023, 18:47 IST
   

ಬೆಂಗಳೂರು: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ 2020–25ನೇ ಸಾಲಿಗೆ ನಡೆದಿದ್ದ ಚುನಾವಣೆಯನ್ನು ಅಕ್ರಮ ಎಂದು ಸಹಕಾರ ಸಂಘಗಳ ಉಪ ನಿಬಂಧಕರು ರದ್ದುಗೊಳಿಸಿದ್ದು, ಸಂಘದ ಬೈ–ಲಾದಂತೆ ಸದಸ್ಯರ ಪರಿಷ್ಕೃತ ಪಟ್ಟಿ ತಯಾರಿಸಿ ಮರು ಚುನಾವಣೆ ನಡೆಸುವಂತೆ ಆದೇಶಿಸಿದ್ದಾರೆ.

ಸಂಘದ ಪದಾಧಿಕಾರಿಗಳ ಆಯ್ಕೆಗೆ ಡಿಸೆಂಬರ್ 2020ರಲ್ಲಿ ಚುನಾವಣೆ ನಡೆದಿತ್ತು. ಶಂಭುಲಿಂಗನಗೌಡ ಅಧ್ಯಕ್ಷರಾಗಿ, ಚಂದ್ರಶೇಖರ ನುಗ್ಗಲಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಸಿ.ಬಿ.ಜಯರಂಗ ಅವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಸಂಘದ ಬೈ–ಲಾ ಪ್ರಕಾರ ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರು, ಮುಖ್ಯಶಿಕ್ಷಕರು ಸಂಘದ ಸದಸ್ಯರಾಗಬಹುದು. ಆದರೆ, ಚುನಾವಣೆಯ ಮತದಾರರಪಟ್ಟಿಯಲ್ಲಿ ಅಧಿಕ ಸಂಖ್ಯೆಯಲ್ಲಿ 6ರಿಂದ 8ನೇ ತರಗತಿಯ ಪದವೀಧರ ಪ್ರಾಥಮಿಕ ಶಿಕ್ಷಕರು (ಜಿಪಿಟಿ), ಪದವೀಧರ ತರಬೇತಿ ಶಿಕ್ಷಕರು (ಟಿಜಿಟಿ) ಸ್ಥಾನಪಡೆದಿದ್ದರು. ಈ ಅಕ್ರಮದಿಂದಾಗಿ ಚುನಾವಣೆಯಲ್ಲಿ ಒಂದು ಗುಂಪು ಗೆಲುವು ಪಡೆಯಲು ಸಹಕಾರಿಯಾಗಿದೆ ಎಂದು ಉಪ ನಿಬಂಧಕರು ಆದೇಶದಲ್ಲಿ ವಿವರಿಸಿದ್ದಾರೆ.

ADVERTISEMENT

ಚುನಾವಣಾ ಪ್ರಕ್ರಿಯೆ ಪ್ರಶ್ನಿಸಿ, ಫಲಿತಾಂಶ ರದ್ದುಮಾಡುವಂತೆ ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಕ ಪೋಲೂರು ಮುರಳೀಧರ ಅವರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿ ಕುರಿತು ವಿಚಾರಣೆ ಮಾಡಲು ಸಂಘಗಳ ಜಿಲ್ಲಾ ನೋಂದಣಾಧಿಕಾರಿಯನ್ನು ನೇಮಿಸಲಾಗಿತ್ತು. ವಿಚಾರಣೆ ನಡೆದು, ಆದೇಶ ಹೊರಡಿಸಲಾಗಿದೆ. ಚುನಾವಣಾಧಿಕಾರಿ ನೇಮಕ ಮಾಡಿಕೊಂಡು ಪರಿಷ್ಕೃತ ಸದಸ್ಯರ ಪಟ್ಟಿಯಂತೆ ಚುನಾವಣೆ ನಡೆಸಲು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.