ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕೆನರಾ ಬ್ಯಾಂಕ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಶುಲ್ಕವನ್ನು ದುರ್ಬಳಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರ ನೇಮಕಾತಿಯನ್ನು ಉನ್ನತ ಶಿಕ್ಷಣ ಇಲಾಖೆ ಹಿಂಪಡೆದಿದೆ.
ಕುಲಸಚಿವ ಪ್ರೊ.ಕೆ.ಜನಾರ್ದನಮ್ ಅವರು ಸಿಬ್ಬಂದಿಯೊಬ್ಬರ ಜತೆಗೆ ಸೇರಿಕೊಂಡು ₹ 13.73 ಲಕ್ಷ ಹಣವನ್ನು ತಮ್ಮ ಖಾತೆಯಲ್ಲಿ ಠೇವಣಿ ಇರಿಸಿದ್ದರು ಎಂದು ಆರೋಪಿಸಲಾಗಿತ್ತು. ಸಿಂಡಿಕೇಟ್ ಸಭೆಯ ಬಳಿಕ ವಿಶ್ವವಿದ್ಯಾಲಯದ ಅಧಿಕಾರಿಗಳು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಎಫ್ಐಆರ್ ದಾಖಲಿಸಿದ ಮೇರೆಗೆ ಕುಲಸಚಿವರಾಗಿ ಅವರನ್ನು ನೇಮಕ ಮಾಡಿದ ಆದೇಶವನ್ನು ಉನ್ನತ ಶಿಕ್ಷಣ ಇಲಾಖೆ ಹಿಂದಕ್ಕೆ ಪಡೆದು, ಈ ಹಿಂದಿನ ಬೆಂಗಳೂರು ವಿಶ್ವವಿದ್ಯಾಲಯದ ವಿಭಾಗಕ್ಕೆ ಕಳುಹಿಸಿದೆ.
ವರ್ಚಸ್ಸು ಹಾಳು ಮಾಡುವ ಯತ್ನ: ‘ವಿಚಾರಣಾ ಸಮಿತಿಯ ತನಿಖೆಗೆ ನಾನು ಹೈಕೋರ್ಟ್ನಿಂದ ತಡೆ ತಂದಿದ್ದೆ. ಹೀಗಿದ್ದರೂ ನನ್ನ ವಿರುದ್ಧ ದೂರು ನೀಡಲಾಗಿದೆ. ನಾನು ಅಧಿಕಾರಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ನನ್ನ ವರ್ಚಸ್ಸು ಹಾಳು ಮಾಡುವ ಸಲುವಾಗಿಯೇ ಕೆಲವರು ಇದನ್ನು ಮಾಡಿದ್ದಾರೆ’ ಎಂದು ಪ್ರೊ.ಜನಾರ್ದನಮ್ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.