ADVERTISEMENT

ಬೆಂಗಳೂರು: ಚಿಕಿತ್ಸೆ ಸಿಗದೆ ರಾಜಭವನದ ಬಾಗಿಲು ತಟ್ಟಿದ ವೃದ್ಧ !

ಹಾಸಿಗೆಗಾಗಿ ಪರದಾಟ: ಆಸ್ಪತ್ರೆಗೆ ದಾಖಲಿಸಲು ದಿನವಿಡೀ ಅಲೆದಾಟ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 20:15 IST
Last Updated 19 ಜುಲೈ 2020, 20:15 IST
ಆಸ್ಪತ್ರೆಯೊಂದರ ಎದುರು ಚಿಕಿತ್ಸೆಗಾಗಿ ಕಾಯುತ್ತಿದ್ದ ವೃದ್ಧ
ಆಸ್ಪತ್ರೆಯೊಂದರ ಎದುರು ಚಿಕಿತ್ಸೆಗಾಗಿ ಕಾಯುತ್ತಿದ್ದ ವೃದ್ಧ   

ಬೆಂಗಳೂರು: ನಗರದಲ್ಲಿ ಹಲವು ಆಸ್ಪತ್ರೆಗಳಿಗೆ ಅಲೆದಾಡಿದರೂ 81 ವರ್ಷದ ವೃದ್ಧರೊಬ್ಬರನ್ನು ದಾಖಲಿಸಲು ಸಾಧ್ಯವಾಗಿರಲಿಲ್ಲ. ಬಳಿಕ ಅವರ ಕುಟುಂಬದವರು ಅವರನ್ನು ರಾಜಭವನದ ಪ್ರವೇಶದ್ವಾರದವರೆಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ದು, ಆಸ್ಪತ್ರೆಯಲ್ಲಿ ಹಾಸಿಗೆ ಕೊಡಿಸುವಂತೆ ಭಾನುವಾರ ಮನವಿ ಮಾಡಿದರು.

‘ನಮ್ಮ ದೊಡ್ಡಪ್ಪನಿಗೆಉಸಿರಾಟದ ತೊಂದರೆ ಇತ್ತು. ಭಾನುವಾರ ಬೆಳಿಗ್ಗೆ 6ರಿಂದ ಸಂಜೆಯವರೆಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದೆವು. ಸೇಂಟ್‌ ಫಿಲೊಮಿನಾ, ಸೇಂಟ್‌ ಜಾನ್‌, ಸಂಜಯ್‌ ಗಾಂಧಿ, ರಾಜೀವ್‌ ಗಾಂಧಿ ಸೇರಿದಂತೆ ಹಲವು ಆಸ್ಪತ್ರೆಗಳಿಗೆ ಓಡಾಡಿದರೂ ಎಲ್ಲೂ ದಾಖಲಿಸಿಕೊಳ್ಳಲಿಲ್ಲ. ಹಾಸಿಗೆ ಖಾಲಿ ಇಲ್ಲ, ಆಕ್ಸಿಜನ್‌ ವ್ಯವಸ್ಥೆ ಇಲ್ಲ ಎಂದು ಸಬೂಬು ಹೇಳಿ ಕಳಿಸಿದರು. ಕೊನೆಗೆ ನಾವೇ ಖಾಸಗಿ ಆಂಬುಲೆನ್ಸ್‌ ತೆಗೆದುಕೊಂಡು, ಆಕ್ಸಿಜನ್‌ ವ್ಯವಸ್ಥೆ ಮಾಡಿಕೊಂಡು ಅಲೆದಾಡಿದೆವು. ಆಸ್ಟಿನ್‌ ಟೌನ್‌ನ ಫುಟ್‌ಪಾತ್‌ನಲ್ಲಿಯೇ ಮೂರು ತಾಸು ಕಾಯಬೇಕಾಯಿತು’ ಎಂದು ಸಂಬಂಧಿ ಸಲೀಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡುವಂತೆ ಕೋರಿ ರಾಜಭವನಕ್ಕೇ ಆಂಬುಲೆನ್ಸ್‌ನಲ್ಲಿ ಅವರನ್ನು ಕರೆದುಕೊಂಡು ಹೋದೆವು. ಅಲ್ಲಿನ ಪ್ರವೇಶದ್ವಾರದ ಬಳಿ ಇದ್ದ ಭದ್ರತಾ ಸಿಬ್ಬಂದಿ ರಾಜಾಜಿನಗರದ ಸಂಜೀವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲಿ ದಾಖಲು ಮಾಡಿಕೊಳ್ಳುತ್ತಾರೆ ಎಂದರು. ಆದರೆ, ಅವರೂ ಹಾಸಿಗೆ ಇಲ್ಲ ಎಂದು ಹೇಳಿ ಕಳಿಸಿದರು. ಕೊನೆಗೆ, ಶಾಸಕ ಎನ್.ಎ.ಹ್ಯಾರಿಸ್‌ ಪುತ್ರ ಮಹಮ್ಮದ್‌ ನಲಪಾಡ್‌ ಅವರು ಎಂ.ಎಸ್. ರಾಮಯ್ಯ ಆಸ್ಪತ್ರೆಯವರಿಗೆ ಕರೆ ಮಾಡಿದರು. ಆ ಆಸ್ಪತ್ರೆಯಲ್ಲಿ ದೊಡ್ಡಪ್ಪನನ್ನು ದಾಖಲು ಮಾಡಿಕೊಂಡರು.ಈಗ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಸಲೀಂ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.