ಬೆಂಗಳೂರು: ಬ್ಯಾಗ್ ತಯಾರಿಕೆ ಕಾರ್ಖಾನೆ ಮೇಲೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರೇತರ ಸ್ವಯಂ ಸಂಸ್ಥೆಯ ಪ್ರತಿನಿಧಿಗಳು ಇತ್ತೀಚೆಗೆ ದಿಢೀರ್ ದಾಳಿ ಮಾಡಿ ನಾಲ್ವರು ಬಾಲ ಕಾರ್ಮಿಕರನ್ನು ಬಿಡುಗಡೆ ಮಾಡಿ ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ.
ಇಲ್ಲಿನ ಶ್ಯಾಂಪುರ ರೈಲ್ವೆ ಗೇಟ್ ಸಮೀಪದ ರುಷದ್ ನಗರದಲ್ಲಿರುವ ‘ಗ್ಲೋರಿ ಬ್ಯಾಗ್ಸ್’ ಕಾರ್ಖಾನೆ ಮೇಲೆ ದಾಳಿ ನಡೆದಿದ್ದು, ಈ ಕಾರ್ಖಾನೆಯಲ್ಲಿ 5 ರಿಂದ 17ವರ್ಷದೊಳಗಿನ ಮಕ್ಕಳು ದುಡಿಯುತ್ತಿದ್ದರು. ಇವರೆಲ್ಲರೂ ಬಿಹಾರದ ಚಂಪಾರಣ್ ಜಿಲ್ಲೆಯವರು ಎಂದು ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ ನಾಗರಾಜಯ್ಯ ಕೆ.ಜಿ ಹಳ್ಳಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮಕ್ಕಳು ಎಷ್ಟು ಕಾಲದಿಂದ ಕಾರ್ಖಾನೆಯಲ್ಲಿ ದುಡಿಯುತ್ತಿದ್ದರು ಎಂಬ ಮಾಹಿತಿ ಇಲ್ಲ ಎಂದು ಕಾರ್ಮಿಕ ಇಲಾಖೆ ಮೂಲಗಳು ತಿಳಿಸಿವೆ. ಕಾರ್ಖಾನೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.