ADVERTISEMENT

ವೈಭವದ ಇಜ್ತಿಮಾ ಗಾಹ್‌ ಸಮಾವೇಶ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 19:27 IST
Last Updated 2 ಫೆಬ್ರುವರಿ 2019, 19:27 IST
ಕೊಮ್ಮಘಟ್ಟದಲ್ಲಿ ಆಯೋಜಿಸಿದ್ದ ಇಜ್ತಿಮಾ ಗಾಹ್ ಧಾರ್ಮಿಕ ಸಮಾವೇಶಕ್ಕೆ ಆಗಮಿಸಿದ್ದ ಮುಸ್ಲಿಂ ಬಾಂಧವರು- ---– ಪ್ರಜಾವಾಣಿ ಚಿತ್ರ
ಕೊಮ್ಮಘಟ್ಟದಲ್ಲಿ ಆಯೋಜಿಸಿದ್ದ ಇಜ್ತಿಮಾ ಗಾಹ್ ಧಾರ್ಮಿಕ ಸಮಾವೇಶಕ್ಕೆ ಆಗಮಿಸಿದ್ದ ಮುಸ್ಲಿಂ ಬಾಂಧವರು- ---– ಪ್ರಜಾವಾಣಿ ಚಿತ್ರ   

ಬೆಂಗಳೂರು: ಮೂರು ವರ್ಷಗಳಿಗೊಮ್ಮೆ ನಡೆಯುವ 'ಇಜ್ತಿಮಾ ಗಾಹ್' ಧಾರ್ಮಿಕ ಸಮಾವೇಶಕ್ಕೆ ವ್ಯಾಪಕ ಜನಬೆಂಬಲ ದೊರೆಯಿತು.

ತಬ್ಲಿಕ್ ಇ ಜಮಾತ್ ಸಂಘಟನೆಯ ಮುಂದಾಳತ್ವದಲ್ಲಿ ಕೆಂಗೇರಿ ಬಳಿಯ ಕೊಮ್ಮಘಟ್ಟದಲ್ಲಿ ಈ ಬಾರಿ ಆಯೋಜಿಸಲಾಗಿದ್ದ ಮೊದಲ ದಿನದ ಸಮಾವೇಶಕ್ಕೆ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಜನ ಬಂದರು.

ಕಲಾಸಿಪಾಳ್ಯ, ಜಗಜೀವನರಾಂ ನಗರ, ಹಳೇ ಗುಡ್ಡದಹಳ್ಳಿ, ಅಂಚೆಪಾಳ್ಯ, ದೊಡ್ಡಬಸ್ತಿ, ಶಿವಾಜಿನಗರ, ಯಲಹಂಕ ಸೇರಿದಂತೆ ಮೈಸೂರು ರಸ್ತೆ ಅಂಚಿನ ಬಹುತೇಕ ಬಡಾವಣೆಗಳಿಂದ ಸಮಾವೇಶಕ್ಕೆ ಆಗಮಿಸಿದ್ದರು. ಹಾಜಿ ಫಾರೂಕ್ ಸಾಬ್, ನಿಸಾರ್ ಅಹಮದ್ ಸಾಬ್, ಖಾಜಾ ಸಾಬ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಮೌಲ್ವಿಗಳು ಧಾರ್ಮಿಕ ಸಂದೇಶ ಬೋಧಿಸಿದರು. ಜೀವನ ಮೌಲ್ಯಗಳ ಮಹತ್ವವನ್ನು ಸಾರಿದರು.

ADVERTISEMENT

ಇದೇ ವೇಳೆ ಮಾತನಾಡಿದ ಮೌಲ್ವಿ ಹಾಜಿ ಫಾರೂಕ್ ಸಾಬ್, ‘ಸತ್ಯವೇ ಅಲ್ಲಾಹುವನ್ನು ಹುಡುಕುವ ಹಾದಿ. ಸನ್ಮಾರ್ಗದಲ್ಲಿ ನಡೆಯುವ ಮೂಲಕ ಸ್ವರ್ಗವನ್ನು ಗಳಿಸಿಕೊಳ್ಳಬೇಕು. ದುಶ್ಚಟಗಳು ಮನುಷ್ಯನನ್ನು ಹಲವು ಕೆಟ್ಟ ಕೆಲಸಗಳಿಗೆ ದೂಡುತ್ತವೆ. ಅದರಿಂದ ಎಂದಿಗೂ ದೂರವಿರಬೇಕು’ ಎಂದರು.

ಗಮನ ಸೆಳೆದ ಅಚ್ಚುಕಟ್ಟುತನ: ಸಮಾವೇಶದಲ್ಲಿ ನೀರಿನ ವ್ಯವಸ್ಥೆ ಹಾಗೂ ಶೌಚಾಲಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ನೂರಾರು ಪರಿಸರ ಸ್ನೇಹಿ ಶೌಚಾಲಯ, ಶುದ್ಧ ನೀರು ಪೂರೈಸುವ ಮೂಲಕ ಸಾವಿರಾರು ಮಂದಿ ಬಂದರೂ ಯಾವುದೇ ಗೊಂದಲವಾಗದಂತೆ ಕ್ರಮ ವಹಿಸಲಾಗಿತ್ತು.

ಹತ್ತಾರು ಸ್ವಯಂ ಸೇವಕರು ರಸ್ತೆಯಲ್ಲಿ ನಿಂತು ವಾಹನ ಸಂಚಾರವನ್ನು ಖುದ್ದು ಗಮನಿಸಿದರು. ಸಮಾವೇಶ ನಾಳೆಯೂ ನಡೆಯಲಿದ್ದು ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿ ನಾಲ್ಕು ಗಂಟೆಗೆ ಒಬ್ಬ ಮೌಲ್ವಿ ಸಂದೇಶ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.