ಬೆಂಗಳೂರು: ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿರುವ ನೂರಾರು ಮನೆಗಳಲ್ಲಿ ‘ಮನೆ ಖಾಲಿ‘ ಇದೆ ಬೋರ್ಡ್ಗಳು ತೂಗಾಡುತ್ತಿವೆ.
ಆರೇಳು ತಿಂಗಳುಗಳ ಹಿಂದೆ ಹೆಚ್ಚಿಗೆ ಹಣ ಕೊಡುತ್ತೇವೆಂದರೂವಚಂದದ ಮನೆ ಸಿಗುವುದು ಕಷ್ಟವಾಗಿದ್ದ ಮಲ್ಲೇಶ್ವರ, ರಾಜಾಜಿನಗರದಂತಹ ಪ್ರತಿಷ್ಠಿತ ಬಡಾವಣೆಗಳಲ್ಲೂ ಈಗ ‘ಟು ಲೆಟ್‘ ಬೋರ್ಡ್ಗಳು ಕಾಣಿಸುತ್ತಿವೆ. ಅಷ್ಟೇ ಅಲ್ಲ, ಸುಬ್ರಹ್ಮಣ್ಯನಗರ, ಗಾಯತ್ರಿನಗರ, ಪೀಣ್ಯ, ದಾಸರಹಳ್ಳಿ, ಶಿವನಹಳ್ಳಿ, ಮಹಾಲಕ್ಷ್ಮಿಪುರ, ಮಹಾಲಕ್ಷ್ಮಿ ಲೇಔಟ್, ವೈಯಾಲಿಕಾವಲ್, ಕೋದಂಡರಾಮಪುರ, ಶಿವನಗರ, ಶ್ರೀರಾಂಪುರ, ವಿಜಯನಗರ, ಗುಟ್ಟಳ್ಳಿ ಮತ್ತಿತರ ಬಡಾವಣೆಗಳಲ್ಲೂ ಇದೇ ಸ್ಥಿತಿ ಇದೆ.
ಹಾಗಾದರೆ ಬೆಂಗಳೂರಿನಲ್ಲಿ ಹೀಗೆ ಬಾಡಿಗೆ ಮನೆಗಳು ಖಾಲಿ ಇರಲು ಕಾರಣ ಏನು ಎಂಬ ಪ್ರಶ್ನೆ ಹಿಡಿದು ಹೊರಟರೆ ಸಿಗುವ ಮೊದಲನೇ ಉತ್ತರ ‘ಆರ್ಥಿಕ ಹಿಂಜರಿತ‘, ಎರಡನೆಯ ಉತ್ತರವೇ ‘ಕೊರೊನಾ ಸೋಂಕು ಭೀತಿ‘!
ಉದ್ದಿಮೆಗಳು ಮುಚ್ಚಿದ್ದು..
ಆರ್ಥಿಕ ಹಿಂಜರಿತ ಪರಿಣಾಮ ಅನೇಕ ಉದ್ಯಮಗಳು ಮುಚ್ಚಿದ್ದರಿಂದ ಕೆಲಸ ಕಳೆದುಕೊಂಡ ನೂರಾರು ಜನರು ಮನೆ ಬಾಡಿಗೆಗೆ ಹಣ ಹೊಂದಿಸಲಾಗದೆ ಮನೆ ಖಾಲಿ ಮಾಡಿ ಊರುಗಳಿಗೆ ತೆರಳಿದ್ದಾರೆ. ಇದರಿಂದಾಗಿ ಜನವರಿ ಮತ್ತು ಫೆಬ್ರುವರಿಯಿಂದಲೇ ಸಾಕಷ್ಟು ಮನೆಗಳು ಖಾಲಿ ಉಳಿದಿವೆ.
ಆಟೊ ರಿಕ್ಷಾ ಚಾಲಕರು, ಕ್ಯಾಬ್ ಚಾಲಕರು, ಗಾರ್ಮೆಂಟ್ಸ್, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದವರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಕೆಳ ಮಧ್ಯಮ ಮತ್ತು ಮಧ್ಯಮ ವರ್ಗದವರು ಬಾಡಿಗೆ ಹಣ ಕೊಡಲಾಗದೆ ಮನೆ ಖಾಲಿ ಮಾಡಿ ತಮ್ಮ ಊರುಗಳಿಗೆ ಗುಳೆ ಹೋಗುತ್ತಿದ್ದಾರೆ.
ಅದರ ಬೆನ್ನಲ್ಲೇ ಕೊರೊನಾ ಸೋಂಕಿನ ಭೀತಿ ಆವರಿಸಿಕೊಂಡ ಪರಿಣಾಮ, ಇನ್ನಷ್ಟು ಮನೆಗಳು ಖಾಲಿಯಾಗಿವೆ. ಕೊರೊನಾ ಸೋಂಕಿನ ಭೀತಿ ಹೆಚ್ಚಾದ ಮೇಲಂತೂ, ಮನೆಯ ಮಾಲೀಕರೇ ಮನೆ ತೋರಿಸಲು ಮತ್ತು ಬಾಡಿಗೆ ನೀಡಲು ಹಿಂಜರಿಯುತ್ತಿದ್ದಾರೆ.
ಮುಂಗಡ ನೀಡಿದವರು ಬಂದಿಲ್ಲ
ಈ ಮೊದಲೇ ಮನೆ ನೋಡಿ ಅಡ್ವಾನ್ಸ್ ನೀಡಿ ಹೋದವರು ಮರಳಿ ಬಂದಿಲ್ಲ. ಕೊರೊನಾ ಹಾವಳಿ ಕಡಿಮೆಯಾದ ನಂತರ ಬರುವುದಾಗಿ ತಿಳಿಸಿದ್ದಾರೆ. ‘ಅಲ್ಲಿಯವರೆಗೆ ಮನೆ ಖಾಲಿ ಉಳಿದಿದ್ದರೆ ಬರುತ್ತೇವೆ. ಇಲ್ಲದಿದ್ದರೆ ಬೇರೆ ಮನೆ ಹುಡುಕುತ್ತೇವೆ‘ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವಡೆ ಬಾಡಿಗೆದಾರರು ಬರುತ್ತೇವೆ ಎಂದು ಸಜ್ಜಾದರೂ ಮಾಲೀಕರು ‘ಸದ್ಯ ಬೇಡ’ ಎಂದು ಮುಂದೂಡುತ್ತಿದ್ದಾರೆ.
ಯಾರೂ ಬರುತ್ತಿಲ್ಲ..
‘ಮೊದಲ ಅಂತಸ್ತಿನಲ್ಲಿ ಎರಡು ಮನೆ ಖಾಲಿ ಉಳಿದು ಎರಡು ತಿಂಗಳಾಗಿದೆ. 1980ರಲ್ಲಿ ಕಟ್ಟಿಸಿದ ನಂತರ ಇಲ್ಲಿವರೆಗೆ ಇಷ್ಟು ದಿನ ಎಂದಿಗೂ ನಮ್ಮ ಮನೆ ಇಷ್ಟು ದಿನ ಖಾಲಿ ಉಳಿದಿರಲಿಲ್ಲ. ಖಾಲಿಯಾದ ವಾರದೊಳಗೆ ಬಾಡಿಗೆದಾರರು ಬರುತ್ತಿದ್ದರು. ಅಷ್ಟು ಡಿಮ್ಯಾಂಡ್ ಇತ್ತು. ನಮ್ಮ ಗಲ್ಲಿಯಲ್ಲಿಯೇ ಐದಾರು ಮನೆಗಳು ಖಾಲಿಯಾಗಿವೆ. 500–1000 ರೂಪಾಯಿ ಬಾಡಿಗೆ ಕಡಿಮೆ ಮಾಡಲೂ ಸಿದ್ಧ. ಆದರೆ, ಯಾರೂ ಬರುತ್ತಿಲ್ಲವೇ...’ ಎನ್ನುತ್ತಾರೆ ಸುಬ್ರಮಣ್ಯ ನಗರದ 3ನೇ ಮುಖ್ಯರಸ್ತೆಯಲ್ಲಿರುವ ಕಾಮಾಕ್ಷಮ್ಮ.
‘ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಾಡಿಗೆದಾರರು ನವೆಂಬರ್ನಲ್ಲಿ ಮನೆ ಖಾಲಿ ಮಾಡಿದರು. ಹೊಸ ಬಾಡಿಗೆದಾರರು ಬಂದಿಲ್ಲ. ಮೂರ್ನಾಲ್ಕು ತಿಂಗಳಿಂದ ಮನೆ ಖಾಲಿ ಇದೆ. ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಹೊಸ ಬಾಡಿಗೆದಾರರು ಬರಬಹುದು ಎಂಬ ನಿರೀಕ್ಷೆ ಇತ್ತು. ಕೊರೊನಾ ಭೀತಿಯಿಂದ ಅವರೂ ಬರುತ್ತಿಲ್ಲ. ಬ್ರೋಕರ್ಗಳಿಗೆ ಹೇಳಿದರೂ ಪ್ರಯೋಜನವಾ ಗಿಲ್ಲ. ನಮ್ಮ ಯಜಮಾನ್ರು ಹೋದ ನಂತರ ಮನೆ ಬಾಡಿಗೆ ಹಣದಲ್ಲಿಯೇ ಸಂಸಾರ ಸಾಗಿಸುತ್ತಿದ್ದೇವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಹೇಗೆ ಎಂದು ಚಿಂತೆಯಾಗಿದೆ’ ಎನ್ನುವುದು ಮಹಾಲಕ್ಷ್ಮಿಪುರದ ಶೈಲಜಾ ಅವರ ಚಿಂತೆ.
ಹೀಗಾಗಿ, ಆರ್ಥಿಕ ಹಿಂಜರಿಕೆ ಮತ್ತು ಕೊರೊನಾ ಸೋಂಕಿನ ಭೀತಿ ಬಾಡಿಗೆದಾರರು ಮತ್ತು ಮನೆ ಮಾಲೀಕರು ಇಬ್ಬರನ್ನೂ ಬಾಧಿಸಿದ್ದಂತೂ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.