
ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾಗೌಡ ಸೇರಿದಂತೆ ಎಲ್ಲ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿಯಾದ ಬಳಿಕ 64ನೇ ಸಿಸಿಎಚ್ ನ್ಯಾಯಾಲಯದಲ್ಲಿ ಸೋಮವಾರ ಪ್ರಕರಣದ ವಿಚಾರಣೆ ನಡೆಯಿತು.
ದರ್ಶನ್, ಪವಿತ್ರಾಗೌಡ, ಅನುಕುಮಾರ್, ಎಂ.ಲಕ್ಷ್ಮಣ್, ಜಗದೀಶ್, ಪ್ರದೂಷ್ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕವೇ ವಿಚಾರಣೆಗೆ ಹಾಜರಾದರು. ಆರೋಪಿಗಳ ಹಾಜರಾತಿ ಪಡೆದ ಬಳಕ ಆರೋಪಿಗಳ ವಿಚಾರಣೆ ನಡೆಸಲಾಯಿತು.
‘ಪ್ರಕರಣದಲ್ಲಿ ಐದು ಸಾವಿರ ಪುಟಗಳಷ್ಟು ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಅದನ್ನು ಓದಿ ವಾದ ಮಂಡನೆಗೆ ಸಿದ್ಧರಾಗಲು ಕಾಲಾವಕಾಶ ಬೇಕಿದೆ’ ಎಂದು ಆರೋಪಿಗಳ ಪರ ವಕೀಲರು ಮನವಿ ಮಾಡಿದರು.
ಆರೋಪಿಗಳು ಹಾಗೂ ಆರೋಪಿಗಳ ಪರ ವಕೀಲರು ವಿಚಾರಣೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆರು ತಿಂಗಳ ಒಳಗಾಗಿ ವಿಚಾರಣೆ ಪೂರ್ಣಗೊಳಿಸುವಂತೆ ಸೂಚಿಸಿತ್ತು ಎಂದು ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರು ಕೋರ್ಟ್ಗೆ ಮೆಮೊ ಸಲ್ಲಿಸಿದ್ದಾರೆ.
ಇದಾದ ಬಳಿಕ ಕೋರ್ಟ್ ಕಳೆದ ವಾರ ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಿದೆ. ಸಾಕ್ಷಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗಲು ಸೂಚಿಸಬೇಕು. ಆದರೆ, ಆರೋಪಿಗಳ ಪರ ವಕೀಲರು ಮತ್ತೆ ವಾದ ಮಂಡನೆಗೆ, ದಾಖಲೆಗಳ ಅಧ್ಯಯನಕ್ಕೆ ಸಮಯಾವಕಾಶ ಕೇಳಿದ್ದಾರೆ. ಇದರಿಂದ ವಿಚಾರಣೆ ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.