ಬೆಂಗಳೂರು: ಜಂಬೂ ಸವಾರಿ ದಿಣ್ಣೆಯಲ್ಲಿರುವ ಟಿ.ಕೆ.ದೀಪಕ್ ಲೇ ಔಟ್ ಅನ್ನು ಜೆ.ಪಿ.ನಗರ 8ನೇ ಹಂತದ ಬಡಾವಣೆಯಲ್ಲಿ ವಿಲೀನಗೊಳಿಸಿ 2011ರಲ್ಲಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ.
ಈ ಕುರಿತಂತೆ ವೈಯಾಲಿ ಕಾವಲ್ನ ಎನ್.ಷಡಕ್ಷರಿ ಸ್ವಾಮಿ ಸೇರಿದಂತೆ 22 ಜನ ನಿವೇಶನ ಮಾಲೀಕರು ಸಲ್ಲಿಸಿ
ರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಪ್ರತಿವಾದಿಗಳಾದ ಬಿಡಿಎ ಆಯುಕ್ತರು ಮತ್ತು ಬಿಡಿಎ ಬೆಂಗಳೂರು ದಕ್ಷಿಣ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ಹಾಜರಿದ್ದರು. ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಲಾಗಿದೆ.
ಆಕ್ಷೇಪ ಏನು?: ‘ಬೆಂಗಳೂರು ದಕ್ಷಿಣ ಉತ್ತರಹಳ್ಳಿ ಹೋಬಳಿಯ ಕೊತ್ತನೂರು ಗ್ರಾಮದಲ್ಲಿ 11 ಎಕರೆ 13 ಗುಂಟೆ ಪ್ರದೇಶದಲ್ಲಿ ದೀಪಕ್ ಲೇ ಔಟ್ ನಿರ್ಮಿಸಿ ನಿವೇಶನ ಹಂಚಿಕೆ ಮಾಡಲಾಗಿತ್ತು. 20017ರಲ್ಲಿ ಬಡಾವಣೆಯನ್ನು ಬಿಡಿಎಗೆ ಹಸ್ತಾಂತರ ಮಾಡಲಾಗಿತ್ತು. ಏತನ್ಮಧ್ಯೆ 2011ರಲ್ಲಿ ಬಿಡಿಎ 8ನೇ ಹಂತದ ಬಡಾವಣೆ ಅಭಿವೃದ್ಧಿಗೆ ಅಧಿಸೂಚನೆ ಹೊರಡಿಸಿತು. ಇದರಲ್ಲಿ ದೀಪಕ್ ಬಡಾವಣೆಯನ್ನೂ ಸೇರ್ಪಡೆ ಮಾಡಲಾಗಿದೆ. ಇದರಿಂದ ಹಾಲಿ ಇರುವ ದೀಪಕ್ ಲೇ ಔಟ್ ನಿವೇಶನದಾರರಿಗೆ ತೊಂದರೆ ಉಂಟಾಗಿದೆ’ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.