ADVERTISEMENT

ಒಳ ಮೀಸಲಾತಿ ವರದಿ ಸರಿ ಇಲ್ಲ: ಡಿಎಸ್ಎಸ್ ರಾಜ್ಯ ಸಂಚಾಲಕ ಡಿ.ಜಿ. ಸಾಗರ್‌

ವಿಚಾರ ಸಂಕಿರಣದಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ. ಸಾಗರ್‌

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 18:56 IST
Last Updated 8 ಆಗಸ್ಟ್ 2025, 18:56 IST
ವಿಚಾರ ಸಂಕಿರಣದಲ್ಲಿ ವೆಂಕಟಯ್ಯ, ಅಣ್ಣಯ್ಯ, ಶ್ರೀಧರ್ ಕಲಿವೀರ, ಡಿ.ಜಿ.ಸಾಗರ್‌ ಅವರು ಡಾ.ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
– ಪ್ರಜಾವಾಣಿ ಚಿತ್ರ
ವಿಚಾರ ಸಂಕಿರಣದಲ್ಲಿ ವೆಂಕಟಯ್ಯ, ಅಣ್ಣಯ್ಯ, ಶ್ರೀಧರ್ ಕಲಿವೀರ, ಡಿ.ಜಿ.ಸಾಗರ್‌ ಅವರು ಡಾ.ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ. ನಾಗಮೋಹನ್‌ದಾಸ್‌ ನೇತೃತ್ವದ ಆಯೋಗ ಸಲ್ಲಿಸಿರುವ ವರದಿ ಕಗ್ಗಂಟಾಗಿ ಪರಿಣಮಿಸಿದೆ. ಅದರಲ್ಲಿ ಅನೇಕ ತಪ್ಪುಗಳಾಗಿದ್ದು, ಸರಿಪಡಿಸುವ ಮೂಲಕ ಎಲ್ಲರಿಗೂ ನ್ಯಾಯ ಒದಗಿಸಬೇಕು. ಈ ಸಂಬಂಧ ಎದ್ದಿರುವ ಕೂಗು ಸರಿ ಇದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ. ಸಾಗರ್‌ ತಿಳಿಸಿದರು.

ಎಸ್‌ಸಿ/ಎಸ್‌ಟಿ ದಲಿತರ ಜ್ವಲಂತ ಸಮಸ್ಯೆಗಳು: ಮೀಸಲಾತಿ ಏರಿಕೆ ರದ್ದು, ಪಿಟಿಸಿಎಲ್‌ ಕಾಯ್ದೆ ವಿರುದ್ಧ ಕೋರ್ಟ್‌ ತೀರ್ಪುಗಳು ಮತ್ತು ಪರಿಹಾರಗಳು– ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

ಒಳ ಮೀಸಲಾತಿಗಾಗಿ ಸಮೀಕ್ಷೆ ನಡೆಸಲು 65 ಸಾವಿರ ಶಿಕ್ಷಕರನ್ನು ನಿಯೋಜಿಸುವ ಮೂಲಕ ಸರ್ಕಾರ ಒಳ್ಳೆಯ ಕೆಲಸ ಮಾಡಿತ್ತು. ಆದರೆ, ಅವರಿಗೆ ಸರಿಯಾದ ತರಬೇತಿ ಇಲ್ಲದೇ ಇರುವುದು, ಮೊಬೈಲ್‌ ಆ್ಯಪ್‌ಗಳ ಬಳಕೆ–ನೆಟ್‌ವರ್ಕ್‌ ಸಮಸ್ಯೆ ಇನ್ನಿತರ ಕಾರಣಗಳಿಂದ ಸಮೀಕ್ಷೆಯಲ್ಲಿ ವ್ಯತ್ಯಾಸಗಳಾಗಿವೆ ಎಂದು ಹೇಳಿದರು.

ADVERTISEMENT

ಆದಿ ದ್ರಾವಿಡ (ಎಡಿ), ಆದಿ ಕರ್ನಾಟಕ (ಎಕೆ), ಆದಿ ಆಂಧ್ರ (ಎಎ) ಎಂಬುದು ಜಾತಿಗಳೇ ಅಲ್ಲ. ಎಸ್‌ಸಿಯಲ್ಲಿ 101 ಜಾತಿಗಳಲ್ಲ. 98 ಮಾತ್ರ ಇರುವುದು ಎಂದು ಹಿಂದೆ ಸರ್ಕಾರ, ಆಯೋಗ ಹೇಳಿತ್ತು. ಆದರೆ, ಈಗ ಒಳಮೀಸಲಾತಿ ಶಿಫಾರಸ್ಸಿನಲ್ಲಿ ಎಡಿ, ಎಕೆ, ಎಎ ಸಮುದಾಯಗಳು ಶೇ 4ರಷ್ಟಿದ್ದಾರೆ ಎಂದು ಹೇಳಿ, ಅವರಿಗೆ ಶೇ 1ರಷ್ಟು ಮೀಸಲಾತಿ ನೀಡಲು ಶಿಫಾರಸು ಮಾಡಿರುವುದು ವಿಪರ್ಯಾಸ ಎಂದರು.

ಜಾತಿಗಳನ್ನು ಒಡೆದು ‘ಇ’ ಗುಂಪು ಸೃಷ್ಟಿಸಿರುವುದು ಸರಿಯಲ್ಲ. ಸಾಮಾಜಿಕ ಹಿನ್ನೆಲೆಯನ್ನು ಗಮನಿಸದೇ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ‘ಇ’ ಗುಂಪು ಸೃಷ್ಟಿಸಿದ್ದಾರೆ. ಇಷ್ಟಾಗಿಯೂ ಬೇಡ ಜಂಗಮರು ‘ಇ’ ಗುಂಪಿನಲ್ಲಿ ಇಲ್ಲ. ಅವರನ್ನು ‘ಎ’ ಗುಂಪಿಗೆ ಸೇರಿಸಲಾಗಿದೆ. ಸಾಮಾಜಿಕವಾಗಿ ಮುಂದುವರಿದಿರುವ ಜಾತಿಗಳ ಗುರುಗಳು ಅವರು. ಅವರನ್ನು ಆದ್ಯತೆಯ ‘ಎ’ ಗುಂಪಿಗೆ ಸೇರಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ನಾಯಕ ಶ್ರೀಧರ್‌ ಕಲಿವೀರ ಮಾತನಾಡಿ, ‘ದಲಿತರು ಭೂಮಿಯನ್ನು ವಿವಿಧ ಕಾರಣದಿಂದ ಕಳೆದುಕೊಂಡಿರುವುದನ್ನು ಮರಳಿ ಪಡೆಯಬೇಕಿದ್ದರೆ ಪಿಟಿಸಿಎಲ್‌ (ಕೆಲವು ಜಮೀನುಗಳ ಪರಭಾರೆ ನಿಷೇಧ) ಕಾಯ್ದೆಗೆ ತಿದ್ದುಪಡಿ ಮಾಡಬೇಕು. ಸರ್ಕಾರದಲ್ಲಿರುವ ಮನುವಾದಿ ಅಧಿಕಾರಿಗಳು ಬೇಕೆಂದೇ ‘ಕೆಲವು ಜಮೀನುಗಳ’ ಎಂಬುದನ್ನು ‘ಮಂಜೂರಾದ ಭೂಮಿ’ ಎಂದು ದಾಖಲಿಸಿ ಅನ್ಯಾಯ ಮಾಡಿದ್ದಾರೆ. ಪರಭಾರೆ ನಿಷೇಧಿತ ಭೂಮಿ ಎಂದೇ ಅದನ್ನು ಮಾಡಬೇಕು’ ಎಂದು ಆಗ್ರಹಿಸಿದರು.

ಅಂಬೇಡ್ಕರ್‌ ನೀಡಿರುವ ಮೀಸಲಾತಿಯನ್ನು ಬಳಸಿಕೊಂಡು ಉದ್ಯೋಗ ಪಡೆದವರಿಗೆ ಬಡ್ತಿಯಲ್ಲಿ ಅನ್ಯಾಯವಾಗಬಾರದು. ಅಲ್ಲಿಯೂ ಬಡ್ತಿ ಮೀಸಲಾತಿ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು ಎಂದು ಒತ್ತಾಯಿಸಿದರು.

ಹೋರಾಟಗಾರ ಅಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಎಸ್‌ಸಿಎಸ್‌ಪಿ–ಟಿಎಸ್‌ಪಿ ನೋಡಲ್‌ ಅಧಿಕಾರಿ ವೆಂಕಟಯ್ಯ ಉದ್ಘಾಟಿಸಿದರು. ಹೈಕೋರ್ಟ್‌ ವಕೀಲ ಬಿ.ಟಿ. ವೆಂಕಟೇಶ್‌, ಡಿಎಸ್‌ಎಸ್‌ ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್‌ ಅಣ್ಣಯ್ಯ, ಜೈಭೀಮ್‌ ಅಖಿಲ ಭಾರತ ದಲಿತ ಹೋರಾಟ ಸಮಿತಿ ರಾಜ್ಯ ಅಧ್ಯಕ್ಷ ಎಂ.ಎಂ. ರಾಜು, ವಿವಿಧ ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.