ಬೆಂಗಳೂರು: ನಗರದ ಕೆ.ಆರ್.ಪುರ ಹಾಗೂ ವೈಟ್ಫೀಲ್ಡ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಎಂಜಿನಿಯರ್ ಸೇರಿ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ.
ಕೆ.ಆರ್.ಪುರದಿಂದ ಟಿನ್ ಫ್ಯಾಕ್ಟರಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆಯಲ್ಲಿ ಬುಧವಾರ ತಡರಾತ್ರಿ ದ್ವಿಚಕ್ರ ವಾಹನವೊಂದು ಉರುಳಿಬಿದ್ದು, ಹಿಂಬದಿ ಸವಾರ ಶರತ್ (22) ಎಂಬುವರು ಮೃತಪಟ್ಟಿದ್ದಾರೆ.
‘ಇತ್ತೀಚೆಗಷ್ಟೇ ಪದವಿ ಪೂರ್ಣಗೊಳಿಸಿದ್ದ ಕೇರಳದ ಶರತ್ ಹಾಗೂ ಅವರ ಸ್ನೇಹಿತ ಅಖಿಲ್ ಜೋಸೆಫ್, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಇಬ್ಬರೂ ಸೇರಿ ‘ಬೌನ್ಸ್’ ಕಂಪನಿಯ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಕೆ.ಆರ್.ಪುರ ಸಂಚಾರ ಪೊಲೀಸರು ಹೇಳಿದರು.
‘ಅತಿ ವೇಗದ ಚಾಲನೆಯಿಂದ ರಸ್ತೆಯಲ್ಲೇ ವಾಹನ ಉರುಳಿಬಿದ್ದಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ಶರತ್ ಅವರನ್ನು ನಿಮ್ಹಾನ್ಸ್ಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಸವಾರ ಅಖಿಲ್ಗೆ ಸಣ್ಣಪುಟ್ಟ ಗಾಯಗಳಾಗಿವೆ. ನಿರ್ಲಕ್ಷ್ಯದಿಂದ ವಾಹನ ಓಡಿಸಿದ್ದಕ್ಕಾಗಿ ಅಖಿಲ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.