ಸಾಂದರ್ಭಿಕ ಚಿತ್ರ
ಪ್ರಜಾವಾಣಿ ವಾರ್ತೆ
ಬೆಂಗಳೂರು: ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ವೈದ್ಯರು ಬೆನ್ನುಮೂಳೆ ಸಮಸ್ಯೆಯಿಂದ ಬಳಲುತ್ತಿದ್ದ ಮೂವರಿಗೆ ರೊಬೊಟಿಕ್ ತಂತ್ರಜ್ಞಾನದ ನೆರವಿನಿಂದ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಬೆನ್ನುಮೂಳೆ ಕ್ಷಯ ರೋಗದಿಂದ ಬಳಲುತ್ತಿದ್ದ 14 ವರ್ಷದ ಉಷಾ ಎಚ್.ಎಂ., ‘ಸ್ಕೋಲಿಯೋಸಿಸ್’ ಸಮಸ್ಯೆ ಎದುರಿಸುತ್ತಿದ್ದ 17 ವರ್ಷದ ಸಾಜಿಯಾ ಐಮನ್ ಮತ್ತು ‘ಬ್ರೂಸೆಲ್ಲಾ’ ಸೋಂಕಿನಿಂದ ಬಳಲುತ್ತಿದ್ದ 34 ವರ್ಷದ ವೆಂಕೋಬ ಅವರು ರೊಬೊಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ‘ಸ್ಪೈನ್ ರೊಬೊಟ್’, ‘ಒ-ಆರ್ಮ್ ಇಂಟ್ರಾ ಆಪರೇಟಿವ್ ಇಮೇಜಿಂಗ್’, ‘ಸ್ಪೈನಲ್ ನ್ಯಾವಿಗೇಷನ್’ ಮತ್ತು ‘ನ್ಯೂರೋಮಾನಿಟರಿಂಗ್’ ಎಂಬ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು, ಮೂರು ಸಂಕೀರ್ಣ ಬೆನ್ನುಮೂಳೆ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
‘ಈಗಾಗಲೇ ಆಸ್ಪತ್ರೆಯು 10 ಸಾವಿರಕ್ಕೂ ಹೆಚ್ಚು ಯಶಸ್ವಿ ಮೂಳೆ ಶಸ್ತ್ರಚಿಕಿತ್ಸೆಗಳನ್ನು ನಡೆಸಿದೆ. ಸಂಕೀರ್ಣ ಬೆನ್ನುಮೂಳೆ ಸಮಸ್ಯೆಗಳನ್ನು ಹೊಂದಿರುವವರಿಗೆ, ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ’ ಎಂದು ಆಸ್ಪತ್ರೆಯ ಬೆನ್ನುಮೂಳೆ ಶಸ್ತ್ರಚಿಕಿತ್ಸೆ ವಿಭಾಗದ ಸಲಹೆಗಾರ ಡಾ. ವಿನು ರಾಜ್ ಹೇಳಿದ್ದಾರೆ.
‘ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಹೊಂದಿದ್ದೆ. ಬೆನ್ನುಮೂಳೆ ಸಮಸ್ಯೆಯು ನನ್ನ ಕನಸಿಗೆ ಭಂಗವನ್ನುಂಟು ಮಾಡಿತ್ತು. ಸರಿಯಾಗಿ ನಡೆಯಲು ಸಾಧ್ಯವಾಗದೆ ನಿರಾಶಳಾಗಿದ್ದೆ. ಶಸ್ತ್ರಚಿಕಿತ್ಸೆಯ ಬಳಿಕ ದಿನದಿಂದ ದಿನಕ್ಕೆ ಬಲಿಷ್ಠಳಾಗುತ್ತಿದ್ದೇನೆ’ ಎಂದು ಉಷಾ ಎಚ್.ಎಂ. ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.