ಬೆಂಗಳೂರು: ರೈತರ ಸಾಲ ಮನ್ನಾ ಮಾಡಿದ ಈ ಹಿಂದಿನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲ್ಲೂಕಿನ ಹಿರೇಸೂರದ ರೈತ ಗೋವಿಂದಪ್ಪ ಶ್ರೀಹರಿ ಅವರುತಮ್ಮ ಹೊಲದಲ್ಲಿ ಬೆಳೆದ ಜೋಳದ ರೊಟ್ಟಿಯ ಉಡುಗೊರೆ ಕಳುಹಿಸಿದ್ದಾರೆ.
ಒಂದು ಪೆಟ್ಟಿಗೆಯಲ್ಲಿ ತುಂಬಿಡಲಾಗಿದ್ದ ರೊಟ್ಟಿ, ಶೇಂಗಾ ಚಟ್ನಿ ಪುಡಿ, ಡ್ರೈ ಪಲ್ಯಾ ಒಳಗೊಂಡ ಕೊರಿಯರ್ ಬುಧವಾರ ಜೆ.ಪಿ.ನಗರದಲ್ಲಿರುವ ಕುಮಾರಸ್ವಾಮಿ ಅವರ ಮನೆಗೆ ಬಂದಿತ್ತು. ಭದ್ರತಾ ಸಿಬ್ಬಂದಿ ಅದನ್ನು ಬಿಚ್ಚಿ ನೋಡಿದಾಗ ಅದರಲ್ಲಿ ರೈತನ ಪ್ರೀತಿಯ ಉಡುಗೊರೆ ಕಾಣಿಸಿತು. ಜತೆಗೆ ಒಂದು ಪತ್ರವೂ ಇತ್ತು.
ಗೋವಿಂದಪ್ಪ ಶ್ರೀಹರಿ ಅವರು ಸಾಲಬಾಧೆಯಿಂದ ನೇಣಿಗೆ ಕೊರಳೊಡ್ಡುವ ಪರಿಸ್ಥಿತಿಗೆ ಬಂದಿದ್ದರು. ಅವರು ಕುಮಾರಸ್ವಾಮಿಯವರಿಗೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನ ಮಾಡಿದ್ದೇನೆಂದು ಪತ್ರ ಬರೆದಿದ್ದರು. ಪತ್ರದಲ್ಲಿದ್ದ ಫೋನ್ ನಂಬರ್ಗೆತಕ್ಷಣವೇ ಫೋನಾಯಿಸಿದ್ದ ಅವರು, ಸಾಲಮನ್ನಾ ಆಗುತ್ತದೆ, ಆತ್ಮಹತ್ಯೆಯಂತಹ ನಿರ್ಧಾರ ಮಾಡ
ಬಾರದೆಂದು ಸಾಂತ್ವನ ಹೇಳಿದ್ದರು. ಬಳಿಕ ಸಾಲಮನ್ನಾವೂ ಆಯಿತು. ಇದೇ ಖುಷಿಯಲ್ಲಿ ಬಂದ ಫಸಲಿನಿಂದ ರೊಟ್ಟಿ ತಯಾರಿಸಿ ಪಾರ್ಸೆಲ್ ಮಾಡಿ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ.
‘ಗೋವಿಂದಪ್ಪ ಶ್ರೀಹರಿ ಅಂಥ ರೈತರೇ ನನ್ನ ರಾಜಕೀಯ ಜೀವನಕ್ಕೆ ಸ್ಪೂರ್ತಿ’ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.