ಬೆಂಗಳೂರು: ತಾವು ‘ರೌಡಿ’ ಆಗಬೇಕು. ತಮ್ಮನ್ನು ನೋಡಿ ಎಲ್ಲರೂ ಭಯಪಡಬೇಕು ಎಂದುಕೊಂಡು ದರೋಡೆ ಮಾಡಲು ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಭೋಗನಹಳ್ಳಿ ನಿವಾಸಿ ಕೀರ್ತಿ (23) ಹಾಗೂ ಮಂಜುನಾಥ್ (23) ಬಂಧಿತರು. ಅವರಿಂದ 9 ಲಾಂಗ್, ಡ್ರ್ಯಾಗರ್ ಹಾಗೂ ಎರಡು ಬೈಕ್ ಜಪ್ತಿ ಮಾಡಲಾಗಿದೆ. ಮೂವರು ಸಹಚರರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಬೆಳ್ಳಂದೂರು ರೈಲ್ವೆ ನಿಲ್ದಾಣ ಬಳಿ ನಿರ್ಜನ ಪ್ರದೇಶದಲ್ಲಿ ನಿಂತಿದ್ದ ಆರೋಪಿಗಳು, ದಾರಿಯಲ್ಲಿ ಬರುವ ಸಾರ್ವಜನಿಕರಿಗಾಗಿ ಕಾಯುತ್ತಿದ್ದರು. ಅವರಿಗೆ ಮಾರಕಾಸ್ತ್ರ ತೋರಿಸಿ ದರೋಡೆ ಮಾಡುವ ಉದ್ದೇಶ ಅವರದ್ದಾಗಿತ್ತು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.