ಬೆಂಗಳೂರು: ಅಪರಾಧ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಹೆಗ್ಗನಹಳ್ಳಿ ನಿವಾಸಿ, ರೌಡಿಶೀಟರ್ ನರಸಿಂಹ ಅಲಿಯಾಸ್ ಸಿಡಿ ನರಸಿಂಹ (40) ಎಂಬಾತನನ್ನು ಮಂಗಳವಾರ ರಾತ್ರಿ 8.15ರ ಸುಮಾರಿಗೆ ಅವನ ಮನೆ ಮುಂಭಾಗದಲ್ಲೇ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಬ್ಯಾಡರಹಳ್ಳಿ ಮತ್ತು ರಾಜಗೋಪಾಲ ನಗರ ಠಾಣೆಗಳ ರೌಡಿ ಶೀಟರ್ ಪಟ್ಟಿಯಲ್ಲಿರುವ ನರಸಿಂಹ ವಿರುದ್ಧ ಕೊಲೆ, ಕೊಲೆ ಯತ್ನ, ಡಕಾಯಿತಿ ಸೇರಿದಂತೆ 20ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಹಳೆದ್ವೇಷವೇ ಕೊಲೆಗೆ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಹಲವು ಘೋರ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ ನರಸಿಂಹ, ಅಲ್ಲಿಂದ ಬಿಡುಗಡೆಯಾಗಿ ಬಂದ ಬಳಿಕವೂ ತನ್ನ ಚಾಳಿ ಮುಂದುವರಿಸಿದ್ದ. ಅದಕ್ಕಾಗಿ ತನ್ನದೇ ಆದ ಗುಂಪು ಕಟ್ಟಿಕೊಂಡಿದ್ದ. ಈತನನ್ನು ಹಲವು ಬಾರಿ ಪೊಲೀಸರು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದರೂ, ಕ್ಯಾರೇ ಎಂದಿರಲಿಲ್ಲ. 2016ರಲ್ಲಿ ಆತನ ವಿರುದ್ಧ ಗೂಂಡಾ ಕಾಯ್ದೆ ಹಾಕಲಾಗಿತ್ತು.
ಎರಡು ತಿಂಗಳ ಹಿಂದೆಯಷ್ಟೇ ಜೈಲಿನಿಂದ ನರಸಿಂಹ, ನಗರದ ಹೊರವಲಯದ ತಾವರೆಕೆರೆ ಬಳಿ 2014ರ ಜುಲೈ13ರಂದು ನಡೆದಿದ್ದ ರಾಜಗೋಪಾಲ ನಗರ ಠಾಣೆ ರೌಡಿಶೀಟರ್ ಚೇತನ್ ಕುಮಾರ ಅಲಿಯಾಸ್ ಚೇತು (30) ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ 2009ರಲ್ಲಿ ಭದ್ರ ಎಂಬಾತನನ್ನು ಚೇತನ್ ಹತ್ಯೆ ಮಾಡಿದ್ದ. ಭದ್ರನ ಸಹೋದರ ನರಸಿಂಹ, ಚೇತನ್ನ ಕೊಲೆಗೆ ಸಂಚು ರೂಪಿಸಿದ್ದ. ಈ ವಿಚಾರ ತಿಳಿದ ಚೇತನ್, 2010ರಲ್ಲಿ ನರಸಿಂಹನ ಮೇಲೂ ಹಲ್ಲೆ ನಡೆಸಿದ್ದ. ಈ ಘಟನೆ ನಂತರ ಚೇತನ್ ವಿರುದ್ಧ ರಾಜಗೋಪಾಲ ನಗರ ಠಾಣೆ ಪೊಲೀಸರು ರೌಡಿಪಟ್ಟಿ ತೆರೆದಿದ್ದರು. ಜೈಲಿಂದ ಬಿಡುಗಡೆಯಾದ ಬಳಿಕ ಚೇತನ್ ರೌಡಿಸಂ ಬಿಟ್ಟು ಹಣಕಾಸು ಲೇವಾದೇವಿ ಮಾಡಿಕೊಂಡಿದ್ದ. ಆದರೆ, ನರಸಿಂಹ, ತನ್ನ ಸ್ನೇಹಿತರನ್ನು ಜತೆ ಸೇರಿ ಚೇತನ್ನನ್ನು ಕೊಲೆ ಮಾಡಿದ್ದ. ರೌಡಿ ಲಕ್ಷ್ಮಣ ಮತ್ತು ಆಟೋ ರಾಮನ ತಂಡದ ಜೊತೆಗೂ ನರಸಿಂಹ ಮುನಿಸಿಕೊಂಡಿದ್ದ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.