ADVERTISEMENT

ಆನೇಕಲ್ ಪುರಸಭೆ: ರೌಡಿ ಶೀಟರ್ ನಾಮ ನಿರ್ದೇಶನ, ವ್ಯಾಪಕ ಟೀಕೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 21:10 IST
Last Updated 2 ಡಿಸೆಂಬರ್ 2022, 21:10 IST
ರೌಡಿ ಮಂಜುನಾಥ
ರೌಡಿ ಮಂಜುನಾಥ   

ಬೆಂಗಳೂರು: ಆನೇಕಲ್‌ ಪುರಸಭೆಗೆ ಐವರನ್ನು ನಾಮ ನಿರ್ದೇಶನ ಮಾಡಿದ್ದು ಅವರಲ್ಲಿ ಮಡಿವಾಳದ ರೌಡಿ ಪಟ್ಟಿಯಲ್ಲಿರುವ ಮಂಜುನಾಥ್ ಎಸ್‌ ಅಲಿಯಾಸ್‌ ಕುಟ್ಟಿಯ ಹೆಸರೂ ಇದೆ.

ಮಂಜುನಾಥ್‌ ಸದ್ಯವೇ ಬಿಜೆಪಿ ಸೇರಲಿದ್ದಾನೆ ಎಂದು ಹೇಳಲಾಗಿದ್ದು, ಅಪರಾಧ ಹಿನ್ನೆಲೆಯುಳ್ಳ ಈತನನ್ನು ನಾಮನಿರ್ದೇಶನ ಮಾಡಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.

ಕೆ.ಮಂಜುನಾಥ ರೆಡ್ಡಿ, ರಂಗಸ್ವಾಮಿ, ಮುರಳಿ ಡಿ.ವಿ, ಮಂಜುನಾಥ್‌ ಎಸ್‌ ಮತ್ತು ರೂಪಾ ನಾಮನಿರ್ದೇಶನಗೊಂಡವರು.

ADVERTISEMENT

ರೌಡಿ ಮಂಜುನಾಥ್ ಅಲಿಯಾಸ್ ಕುಟ್ಟಿ ಹೆಸರು ನಗರದ ಮಡಿವಾಳ ಠಾಣೆಯ ರೌಡಿ ಪಟ್ಟಿಯಲ್ಲಿದೆ. ನಖರ ಬಾಬು ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಅಲ್ಲದೆ ಹಲವು ಅಪರಾಧದ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಸಿಸಿಬಿ ರೌಡಿ ನಿಗ್ರಹ ಪಡೆಯ ಅಧಿಕಾರಿಗಳು, ಮಂಜುನಾಥ್‌ನಿಗೆ ಹಲವು ಬಾರಿ ನೋಟಿಸ್ ನೀಡಿ ವಿಚಾರಣೆ ಮಾಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸೈಲೆಂಟ್‌ ಸುನೀಲ್‌ ಏರ್ಪಡಿಸಿದ್ದ ರಕ್ತದಾನ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್, ಶಾಸಕ ಉದಯ ಗರುಡಾಚಾರ್ ಭಾಗವಹಿಸಿದ್ದರು. ಸಚಿವ ವಿ.ಸೋಮಣ್ಣ ಅವರನ್ನು ರೌಡಿ ಪಟ್ಟಿಯಲ್ಲಿ ಹೆಸರಿದ್ದ ವಿಲ್ಸನ್‌ ಗಾರ್ಡನ್‌ ನಾಗ ಭೇಟಿ ಮಾಡಿದ್ದ. ಮಂಡ್ಯದ ಫೈಟರ್‌ ರವಿಯನ್ನು ಬಿಜೆಪಿಗೆ ಸೇರಿಸಿಕೊಂಡಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.