ರಾಜರಾಜೇಶ್ವರಿನಗರ: ಸ್ಫೂರ್ತಿಧಾಮದಲ್ಲಿ ಹಮ್ಮಿಕೊಂಡಿದ್ದ ‘ಅಂಬೇಡ್ಕರ್ ಹಬ್ಬ’ದಲ್ಲಿ ಪ್ರೊ.ಆನಂದ್ ತೇಲ್ತುಂಬ್ಡೆ ಅವರಿಗೆ ಬೋಧಿವೃಕ್ಷ ಪ್ರಶಸ್ತಿ ಹಾಗೂ ಕೋಟಿಗಾನಹಳ್ಳಿ ರಾಮಯ್ಯ, ನರೇಂದ್ರ ನಾಯಕ್, ಜಾನಕಮ್ಮ, ತ್ರಿವಿಕ್ರಮ ಮಹಾದೇವ, ರುಕ್ಮಿಣಿಬಾಯಿ ರೋಹಿದಾಸ್ ಕಾಂಬಳೆ ಅವರಿಗೆ ಬೋಧಿ ವರ್ಧನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೋಧಿವೃಕ್ಷ ಪ್ರಶಸ್ತಿ ₹1 ಲಕ್ಷ ಹಾಗೂ ಬೋಧಿವರ್ಧನ ಪ್ರಶಸ್ತಿ ₹ 20,000 ಒಳಗೊಂಡಿದೆ.
ಈ ವೇಳೆಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಸಾಮಾಜಿಕ ಕಾರ್ಯಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ, ‘ತಳಸಮುದಾಯಗಳ ಸೌಲಭ್ಯಗಳನ್ನು ಕಸಿದುಕೊಳ್ಳಲಾಗುತ್ತಿದೆ. ನಾವು ದುರ್ಬಲರಾಗದೆ ಅದರ ವಿರುದ್ಧ ಧ್ವನಿ ಎತ್ತಬೇಕು’ ಎಂದರು.
ಪತ್ರಕರ್ತ ಇಂದೂಧರ ಹೊನ್ನಾಪುರ,‘ರಾಜಕೀಯವು ಸಂಸ್ಕೃತಿ, ಇತಿಹಾಸ, ಧರ್ಮದ ಹೆಸರನ್ನು ಹೇಳಿಕೊಂಡು ಭಯದ ವಾತಾವರಣ ಸೃಷ್ಟಿ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ನ್ಯಾಯ ಕೇಳುವವರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗುತ್ತಿದ್ದರೂ ಪ್ರಶ್ನಿಸುವ ನೈತಿಕತೆ ದೂರವಾಗುತ್ತಿದೆ. ನ್ಯಾಯಾಲಯಗಳು ನೊಂದ ಜನರಿಗೆ ತುರ್ತಾಗಿ ಸೂಕ್ತ ನ್ಯಾಯ ದೊರಕಿಸಿಕೊಡುವಲ್ಲಿ ಕೆಲಸ ಮಾಡುತ್ತಿದ್ದರೂ, ನ್ಯಾಯಾಲಯದ ದಿಕ್ಕು ತಪ್ಪಿಸುವಲ್ಲಿ ರಾಜಕೀಯದ ಪಾತ್ರ ಕಂಡುಬರುತ್ತಿದೆ’ ಎಂದರು.
ಚಿಂತಕ ಸಿರಾಜ್ ಅಹಮದ್ ,‘ಉದ್ಯಮಿಗಳು, ಬಂಡವಾಳಶಾಹಿಗಳು, ಪ್ರಬುದ್ಧ ರಾಜಕಾರಣಿಗಳೆಂದು ಹೇಳಿಕೊಳ್ಳುವವರ ಕೈಯಲ್ಲಿ ಮಾಧ್ಯಮಗಳು ಇವೆ. ಸಮಾಜಕ್ಕೆ ಸಿಗಬೇಕಾದ ನ್ಯಾಯ ಆ ಮಾಧ್ಯಮಗಳು ಕೊಡಿಸುತ್ತಿಲ್ಲ. ಅವುಗಳಿಂದ ಸಮಾಜಕ್ಕೆ ವ್ಯತಿರಿಕ್ತ ಸಂದೇಶಗಳು ಹೋಗುತ್ತಿವೆ’ ಎಂದು ಬೇಸರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.