ADVERTISEMENT

ಆರ್‌ಎಸ್‌ಎಸ್‌ ಪಥಸಂಚಲನ: ಲಾಠಿಯಿಂದ ಅಶಾಂತಿ: ಜಾಗೃತ ನಾಗರಿಕರು ಕರ್ನಾಟಕ ಸಂಘಟನೆ

ರಾಷ್ಟ್ರಧ್ವಜ, ಸಂವಿಧಾನದ ಪ್ರತಿ ಹಿಡಿದು ಪಥಸಂಚಲನ ನಡೆಸುವಂತೆ ಜಾಗೃತ ನಾಗರಿಕರು ಕರ್ನಾಟಕ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 15:46 IST
Last Updated 29 ಅಕ್ಟೋಬರ್ 2025, 15:46 IST
<div class="paragraphs"><p>ಆರ್‌ಎಸ್‌ಎಸ್‌ ಪಥಸಂಚಲನ&nbsp;</p></div>

ಆರ್‌ಎಸ್‌ಎಸ್‌ ಪಥಸಂಚಲನ 

   

ಬೆಂಗಳೂರು: ‘ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸ್ವಯಂ ಸೇವಕರು ಲಾಠಿ ಹಿಡಿದು ಪಥಸಂಚಲನ ನಡೆಸುವುದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಅವರು ಲಾಠಿ ಬದಲು ರಾಷ್ಟ್ರಧ್ವಜ ಮತ್ತು ಸಂವಿಧಾನದ ಪ್ರತಿ ಹಿಡಿದು ಪಥಸಂಚಲನ ಮಾಡಲಿ’ ಎಂದು ಜಾಗೃತ ನಾಗರಿಕರು ಕರ್ನಾಟಕ ಸಂಘಟನೆ ಸಲಹೆ ನೀಡಿದೆ.

ಈ ಬಗ್ಗೆ ಸಂಘಟನೆಯ ಪ್ರಮುಖರಾದ ಜಿ. ರಾಮಕೃಷ್ಣ, ‌ಕೆ. ಮರುಳಸಿದ್ದಪ್ಪ, ಎಸ್.ಜಿ. ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ವಿಜಯಾ, ಮಾವಳ್ಳಿ ಶಂಕರ್, ಬಂಜಗೆರೆ ಜಯಪ್ರಕಾಶ್, ಬಿ. ಶ್ರೀಪಾದ ಭಟ್, ಮೀನಾಕ್ಷಿ ಬಾಳಿ ಕೆ.ಎಸ್. ವಿಮಲ ಹಾಗೂ ರುದ್ರಪ್ಪ ಹನಗವಾಡಿ ಜಂಟಿ ಹೇಳಿಕೆ ನೀಡಿದ್ದಾರೆ.

ADVERTISEMENT

‘ನ. 2ರಂದು ಕಲಬುರಗಿಯ ಚಿತ್ತಾಪುರದಲ್ಲಿ ನಿಗದಿಯಾಗಿರುವ ಆರ್‌ಎಸ್‌ಎಸ್‌ ಪಥಸಂಚಲನದ ವಿವಾದವು ಪ್ರಜ್ಞಾವಂತರಲ್ಲಿ ಆತಂಕ ಮೂಡಿಸಿದೆ. ಶತಮಾನೋತ್ಸವ ಅಂಗವಾಗಿ ಬೆಂಗಳೂರಿನ ವಿವಿಧೆಡೆ ಸ್ವಯಂ ಸೇವಕರು ಲಾಠಿ ಝಳಪಿಸುತ್ತಾ ಪಥಸಂಚಲನ ನಡೆಸಿದರು. ಸಾರ್ವಜನಿಕವಾಗಿ ಯಾವುದೇ ಆಯಧ ಹಿಡಿದು ತಿರುಗಾಡುವುದು ಅಪರಾಧ. ಕಳೆದ 60 ವರ್ಷಗಳಲ್ಲಿ ಆರ್‌ಎಸ್‌ಎಸ್‌ನ ಅನೇಕ ಪಥಸಂಚಲನಗಳು ಕೋಮು ಗಲಭೆಗಳಿಗೆ ಪ್ರಚೋದನೆಯಾಗಿರುವುದು ಇತಿಹಾಸದಲ್ಲಿ ದಾಖಲಾಗಿದೆ’ ಎಂದು ಹೇಳಿದ್ದಾರೆ.

‘ಸರ್ಕಾರವು ಆರ್‌ಎಸ್‌ಎಸ್‌ ಸ್ವಯಂಸೇವಕರಿಗೆ ಯಾವುದೇ ಕಾರಣಕ್ಕೂ ಪಥಸಂಚಲನ ನೆಪದಲ್ಲಿ ಲಾಠಿ ಹಿಡಿದು ತಿರುಗಾಡುವುದಕ್ಕೆ ಅನುಮತಿ ಕೊಡಬಾರದು. ಪ್ರಜಾಪ್ರಭುತ್ವದಲ್ಲಿ ಮುಕ್ತವಾಗಿ, ಅಹಿಂಸಾತ್ಮಕವಾಗಿ, ಯಾವುದೇ ದ್ವೇಷ ಬಿತ್ತದೆ ಸಾರ್ವಜನಿಕವಾಗಿ ಜಾಥಾ ಮಾಡಲು ಅವಕಾಶವಿದೆ. ಆರ್‌ಎಸ್‌ಎಸ್‌ ಕೂಡ ಲಾಠಿ ಬಿಟ್ಟು ಪಥಸಂಚಲನ ನಡೆಸಲಿ. ಈ ನೀತಿ ಚಿತ್ತಾಪುರಕ್ಕೂ ಅನ್ವಯಿಸಲಿ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಲ್ವರು ಶಿಕ್ಷಕರಿಗೆ ನೋಟಿಸ್

ಔರಾದ್ (ಬೀದರ್‌ ಜಿಲ್ಲೆ): ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ನಾಲ್ವರು ಶಿಕ್ಷಕರಿಗೆ ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಶಿಕ್ಷಕರಾದ ಮಹಾದೇವ ಚಿಟಗಿರೆ, ಶಾಲಿವಾನ ಉದಗಿರೆ, ಪ್ರಕಾಶ ಬರದಾಪುರೆ, ಸತೀಶ ಮಾನಕಾರಿ ಅವರಿಗೆ ಮಂಗಳವಾರ ನೋಟಿಸ್ ಕಳುಹಿಸಿದ್ದಾರೆ. ‘ಅ 7 ಮತ್ತು 13ರಂದು ಅವರು ಪಥ ಸಂಚಲನದಲ್ಲಿ ತಾವು ಭಾಗಿಯಾಗಿದ್ದ ವಿಡಿಯೊ ಹರಿದಾಡುತ್ತಿವೆ ಎಂದು ದಲಿತ ಸೇನೆ ಹಾಗೂ ಬಹುಜನ ಸೇವಾ ಸಮಿತಿ ದೂರು ನೀಡಿವೆ. ತಾವು ಸರ್ಕಾರದ ವಿರುದ್ಧವಾಗಿ
ನಡೆದುಕೊಂಡಿದ್ದಕ್ಕಾಗಿ ಲಿಖಿತ ಹೇಳಿಕೆ ದಾಖಲಿಸಬೇಕು’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.