ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ (ಆರ್ಟಿಇ) ನಿಗದಿಯಾದ ಒಟ್ಟು ಸೀಟುಗಳಲ್ಲಿ ಶೇ 64ರಷ್ಟು ಸೀಟುಗಳು ಅಂತಿಮ ಸುತ್ತಿನ ಆಯ್ಕೆ ಪ್ರಕ್ರಿಯೆಯ ಬಳಿಕ ಖಾಲಿ ಬಿದ್ದಿವೆ.
ಪೋಷಕರಿಂದ ಈ ರೀತಿಯ ನೀರಸ ಪ್ರತಿಕ್ರಿಯೆಯನ್ನು ಗಮನಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ, ತೃತೀಯ ಸುತ್ತಿನ ಆಯ್ಕೆ ಪ್ರಕ್ರಿಯೆಯನ್ನೇ ನಡೆಸದಿರಲು ನಿರ್ಧರಿಸಿದೆ. ಈಚೆಗೆ ಆರ್ಟಿಇ ನಿಯಮಗಳಿಗೆ ಮಾಡಲಾದ ತಿದ್ದುಪಡಿಯೂಇದಕ್ಕೆ ಮತ್ತೊಂದು ಕಾರಣ.
ಆರ್ಟಿಇ ಕೋಟಾದಲ್ಲಿ ಈ ಬಾರಿ 17,720 ಸೀಟುಗಳು ಲಭ್ಯ ಇದ್ದವು. ಈ ಪೈಕಿ 11,40 ಸೀಟುಗಳು ಭರ್ತಿಯಾಗಿಲ್ಲ. ಮೊದಲ ಸುತ್ತಿಗೆ ಹೋಲಿಸಿದರೆ 2ನೇ ಸುತ್ತಿನಲ್ಲಿ ಪ್ರವೇಶಾತಿ ಮತ್ತೂ ಕಡಿಮೆಯಾಗಿದೆ. ಮೊದಲ ಸುತ್ತಿನಲ್ಲಿ 3,797 ವಿದ್ಯಾರ್ಥಿಗಳು ಪ್ರವೇಶ ಪಡೆದಿ
ದ್ದರೆ, ಎರಡನೇ ಸುತ್ತಿನಲ್ಲಿ 2,583 ಮಂದಿ ಮಾತ್ರ ಪ್ರವೇಶ ಪಡೆದಿದ್ದರು.
ಬೆಂಗಳೂರು ದಕ್ಷಿಣದಲ್ಲೇ ಆರ್ಟಿಇಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಅಧಿಕ ಇತ್ತು. ಆದರೆ ಇಲ್ಲೂ ಒಟ್ಟು ಲಭ್ಯವಿದ್ದ 1,262 ಸೀಟುಗಳ ಪೈಕಿ 540 ಸೀಟುಗಳು ಮಾತ್ರ ಭರ್ತಿಯಾಗಿವೆ.
‘ಮಧುಗಿರಿ (42) ಮತ್ತು ಉತ್ತರ ಕನ್ನಡ (13) ಜಿಲ್ಲೆಗಳಲ್ಲಿ ಒಬ್ಬರೂ ಪ್ರವೇಶ ಪಡೆದಿಲ್ಲ. ರಾಜ್ಯದ ಸಾವಿರ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ತೆರೆಯಲು ಸರ್ಕಾರ ನಿರ್ಧರಿಸಿರುವುದರಿಂದ ನೀರಸ ಸ್ಪಂದನ ವ್ಯಕ್ತವಾಗಿರಬಹುದು’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.