ಬೆಂಗಳೂರು: ಕೇಂದ್ರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮೂಲಕ ಸಂಚಾರ ನಿಯಮ ಉಲ್ಲಂಘನೆಗೆ ಭಾರಿ ದಂಡ ಘೋಷಣೆಯಾಗಿ 15 ದಿನ ಕಳೆದರೂ ವಾಹನ ಸವಾರರು ಎಚ್ಚೆತ್ತುಕೊಂಡಿಲ್ಲ!
ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಬುಧವಾರ ಬೆಳಿಗ್ಗೆ 10 ಗಂಟೆವರೆಗಿನ 24 ಗಂಟೆ ಅವಧಿಯಲ್ಲಿ ನಗರ ಸಂಚಾರ ಪೊಲೀಸರು ವಿವಿಧ ಕಡೆ ನಡೆಸಿದ ಕಾರ್ಯಾಚರಣೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 11,855 ಪ್ರಕರಣಗಳನ್ನು ದಾಖಲಿಸಿಕೊಂಡು, ₹ 41.19 ಲಕ್ಷ ದಂಡ ವಸೂಲಿ ಮಾಡಿದ್ದಾರೆ.
ದಾಖಲಾದ ಪ್ರಕರಣಗಳಲ್ಲಿ ಏಕಮುಖ ಸಂಚಾರ ಉಲ್ಲಂಘನೆ 229, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ 413, ಸಮವಸ್ತ್ರ ಧರಿಸದ 436, ನೋ ಎಂಟ್ರಿ ರಸ್ತೆಯಲ್ಲಿ ಪ್ರಯಾಣಿಸಿದ ಸಂಬಂಧ 734 ಪ್ರಕರಣಗಳು ದಾಖಲಾಗಿವೆ.
ವಾಹನಗಳಿಂದ ಕಪ್ಪು ಹೊಗೆ ಹರಡಿ ಪರಿಸರಕ್ಕೆ ಹಾನಿ ಉಂಟು ಮಾಡುವ 103, ಪ್ರಮುಖ ದಾಖಲಾತಿ ಇಲ್ಲದಿರುವ 147, ಒಂದೇ ಬೈಕ್ನಲ್ಲಿ ಮೂವರು ಪ್ರಯಾಣಿಸಿದ 114, ಸೀಟ್ ಬೆಲ್ಟ್ ಹಾಕದ 263 ಪ್ರಕರಣಗಳೂ ಇದರಲ್ಲಿ ಸೇರಿವೆ. ಕುಡಿದು ವಾಹನ ಚಲಾಯಿಸಿದ 21 ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಿಗೆ ಕೋರ್ಟ್ ದಂಡ ವಿಧಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.