ಬೆಂಗಳೂರು: ದರೋಡೆಗೆ ಸಂಚು ರೂಪಿಸುತ್ತಿದ್ದ ಐದು ಮಂದಿಯನ್ನು ಬಂಧಿಸಿರುವ ಬಾಗಲಗುಂಟೆ ಪೊಲೀ ಸರು, ₹ 8 ಲಕ್ಷ ಮೌಲ್ಯದ ಮೂರು ಕಾರು ಮತ್ತು ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಟಿ-ದಾಸರಹಳ್ಳಿಯ ಮೌಲಾ ಅಲಿಯಾಸ್ ಮೌಲಾಲಿ ಅಲಿಯಾಸ್ ಗೋಲ್ಡ್ ಮೌಲಾ (24), ಪೀಣ್ಯ ರುಕ್ಮಿಣಿ ನಗರದ ಸೋಮಶೇಖರ್ ಅಲಿಯಾಸ್ ಸೋಮ (19), ಹೇರೋಹಳ್ಳಿಯ ನವೀನ್ ಕುಮಾರ್ ಅಲಿಯಾಸ್ ಗೊರಿಲ್ಲ (28), ಗಂಗೊಂಡನಹಳ್ಳಿಯ ಮಂಜುನಾಥ ಅಲಿಯಾಸ್ ಕರಿಯ (25) ಮತ್ತು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ನಗರದ ತಬ್ರೇಜ್ ಅಲಿಯಾಸ್ ಸದ್ದಾಂ (26) ಬಂಧಿತರು.
ರವೀಂದ್ರ ನಗರ ಕಡೆಯಿಂದ ಶೆಟ್ಟಿಹಳ್ಳಿ ಕಡೆ ಹೋಗುವ ರಸ್ತೆಯಲ್ಲಿ ಆರು ಮಂದಿ ಚಾಕು, ರಾಡು, ಖಾರದ ಪುಡಿಯ ಪೊಟ್ಟಣ ಮತ್ತು ಮರದ ದೊಣ್ಣೆ ಹಿಡಿದುಕೊಂಡು ದರೋಡೆ ಮಾಡಲು ಸಂಚು ರೂಪಿಸುತ್ತಿರುವ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಒಬ್ಬ ತಲೆಮರೆಸಿಕೊಂಡಿದ್ದಾನೆ. ತುಮಕೂರು ನಗರದ ತಿಲಕ್ಪಾರ್ಕ್, ಬೆಂಗಳೂರಿನ ಸಂಜಯ ನಗರ, ನಂದಿನಿ ಲೇಔಟ್, ಎಚ್.ಎಸ್.ಆರ್ ಲೇಔಟ್, ಕೋಣ ನಕುಂಟೆ, ಬ್ಯಾಡರಹಳ್ಳಿ ಮತ್ತು ಬಾಗಲಗುಂಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ವಾಹನ ಕಳವು ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವುದು ಗೊತ್ತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.