ADVERTISEMENT

ಜಲಮಂಡಳಿ: ರುದ್ರೇಗೌಡ ನೇಮಕಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 21:01 IST
Last Updated 1 ಸೆಪ್ಟೆಂಬರ್ 2020, 21:01 IST

ಬೆಂಗಳೂರು: ಜಲಮಂಡಳಿಗೆ ರುದ್ರೇಗೌಡ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಜಲಮಂಡಳಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಕ್ಷೇಮಾಭಿವೃದ್ಧಿ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.

‘ಜಲಮಂಡಳಿಯ ಆಡಳಿತ ಮಂಡಳಿ ಸದಸ್ಯರಾಗಿ ನಿವೃತ್ತಿಗೊಂಡಿರುವ, ನೌಕರರ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ರುದ್ರೇಗೌಡ ಅವರನ್ನು ಕಾನೂನುಬಾಹಿರವಾಗಿ ಮತ್ತೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ’ ಎಂದು ಸಂಘದ ಅಧ್ಯಕ್ಷ ಕೆ. ನರಸಯ್ಯ ದೂರಿದ್ದಾರೆ.

‘ಸದಸ್ಯರಾಗಿ ನೇಮಕಗೊಳ್ಳುವವರು ವಾಣಿಜ್ಯ ವಿಷಯಗಳು ಮತ್ತು ಆಡಳಿತದಲ್ಲಿ ಅನುಭವ ಹೊಂದಿರಬೇಕು. ಆದರೆ, ರುದ್ರೇಗೌಡ ಅವರು ಸಹಾಯಕ ಮಾರಾಟ ಅಧಿಕಾರಿಯಾಗಿದ್ದರೆ ವಿನಾ ವಾಣಿಜ್ಯ ವಿಷಯಗಳಲ್ಲಿ, ಆಡಳಿತಾತ್ಮಕ ವಿಷಯಗಳಲ್ಲಿ ಅನುಭವ ಹೊಂದಿಲ್ಲ. ಅಲ್ಲದೆ, ಸಿವಿಲ್‌ ಎಂಜಿನಿಯರಿಂಗ್‌ ಕಾಮಗಾರಿಗಳಲ್ಲಿ ಅನುಭವ ಹೊಂದಿರಬೇಕು. ಎಂಜಿನಿಯರಿಂಗ್‌ ಹುದ್ದೆ ನಿಭಾಯಿಸಿದ ಅನುಭವವೂ ರುದ್ರೇಗೌಡ ಅವರಿಗೆ ಇಲ್ಲ. ಸರ್ಕಾರ ಈ ನೇಮಕವನ್ನು ಕೂಡಲೇ ರದ್ದು ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

‘ಮಂಡಳಿಯ ಆಡಳಿತ ಮಂಡಳಿಯ ಸದಸ್ಯ ಅಥವಾ ನಿರ್ದೇಶಕರನ್ನಾಗಿ ನೇಮಕ ಮಾಡುವುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು. ಕಾನೂನು ಪ್ರಕಾರವೇ ಸರ್ಕಾರ ಈ ತೀರ್ಮಾನ ಮಾಡಿದೆ’ ಎಂದು ಜಲಮಂಡಳಿಯ ಅಧ್ಯಕ್ಷ ಎನ್. ಜಯರಾಮ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯೆಗೆ ರುದ್ರೇಗೌಡ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.