ನೆಲಮಂಗಲ: ಪಟ್ಟಣದ ಕವಾಡಿಮಠದ ರುದ್ರೇಶ್ವರ ಸ್ವಾಮಿ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಸೋಮವಾರದಿಂದಲೆ ವಿವಿಧ ದೇವತಾ ಕಾರ್ಯಗಳು ಪ್ರಾರಂಭವಾದವು. ಮಂಗಳವಾರ ಸಂಜೆ ವೀರಗಾಸೆ ಗುಗ್ಗಳದೊಂದಿಗೆ ಪಟಾಕಿ ಮದ್ದುಗಳನ್ನು ಸಿಡಿಸಿಕೊಂಡು ರುದ್ರೇಶ್ವರ ಸ್ವಾಮಿಯನ್ನು ಪಟ್ಟಣದಲ್ಲಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆ ನಂತರ ಗೊನೆ ಸಹಿತ ಬಾಳೆ ಕಂಬವನ್ನು ಕತ್ತರಿಸಿ ಅಗ್ನಿಕುಂಡ ಪ್ರವೇಶ ಮಾಡಲಾಯಿತು ನಂತರ ಭಕ್ತರಿಗೆ ಅಗ್ನಿಕುಂಡ ಪ್ರವೇಶ ಮಾಡಲು ಅನುಮತಿ ಕೊಡಲಾಯಿತು.
ಬುಧವಾರ ಹೋಮ ಹವನಗಳೊಂದಿಗೆ ರುದ್ರೇಶ್ವರ ಸ್ವಾಮಿಯ ರಥೋತ್ಸವ ನಡೆಯಿತು. ಸೋಮವಾರದಿಂದ ಬುಧವಾರದವರೆಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಗುರುವಾರ ಬೆಳಿಗ್ಗೆ ಧಾರ್ಮಿಕ ವಿಧಿ ವಿಧಾನಗಳು ಮುಗಿದವು. ರುದ್ರೇಶ್ವರ ತರುಣ ಸಂಘದಿಂದ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.