
ಸಾಕೇತ್ ಶ್ರೀನಿವಾಸಯ್ಯ
ಬೆಂಗಳೂರು: ‘ನನ್ನ ಮಗ ಇನ್ನೂ ಜೀವಂತವಾಗಿದ್ದಾನೆ ಎಂಬ ನಂಬಿಕೆ ಇದೆ. ಅಲ್ಲಿ ಪತ್ತೆಯಾಗಿರುವ ಮೃತದೇಹ ನನ್ನ ಮಗನದ್ದೇ ಎಂದು ಹೇಗೆ ನಂಬುವುದು’ ಎಂದು ಮೃತ ಸಾಕೇತ್ ಅವರ ತಂದೆ ಶ್ರೀನಿವಾಸಯ್ಯ ಅವರು ವಿಧಾನ ಪರಿಷತ್ ಸದಸ್ಯೆ ಆರತಿ ಕೃಷ್ಣ ಅವರಿಗೆ ತಿಳಿಸಿದ್ದಾರೆ.
ಸಾಕೇತ್ ಅವರ ಪೋಷಕರನ್ನು ಭಾನುವಾರ ಭೇಟಿ ಮಾಡಿದ ಆರತಿ ಕೃಷ್ಣ, ಸಾಂತ್ವನ ಹೇಳಿದರು. ಮೃತದೇಹವನ್ನು ಬೆಂಗಳೂರಿಗೆ ತರಲು ಸಂಬಂಧಪಟ್ಟವರ ಜತೆ ಮಾತುಕತೆ ನಡೆಸಿ, ಅಗತ್ಯ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
‘ಶ್ರೀನಿವಾಸಯ್ಯ ದಂಪತಿ ಅಮೆರಿಕಕ್ಕೆ ತೆರಳಲು ತುರ್ತು ವೀಸಾ ಕೊಡಿಸಲು ಕಾನ್ಸುಲೆಟ್ ಕಚೇರಿ ಜತೆ ಸಂವಹನ ನಡೆಸಲಾಗುತ್ತಿದೆ. ಸಾಕೇತ್ ಮೃತದೇಹ ಸಿಕ್ಕಿದ್ದರೂ ಅವರ ತಂದೆ, ತಾಯಿ ಅದನ್ನು ನಂಬುತ್ತಿಲ್ಲ. ಹತ್ತಿರದ ಸಂಬಂಧಿಕರು ಯಾರೂ ಇಲ್ಲದ ಕಾರಣ ಶ್ರೀನಿವಾಸಯ್ಯ ದಂಪತಿ ಅಮೆರಿಕಕ್ಕೆ ತೆರಳಿ, ಗುರುತಿಸುವುದಾಗಿ ಹೇಳಿದ್ದಾರೆ. ಅದಕ್ಕಾಗಿ ಅವರಿಗೆ ವೀಸಾ ಕೊಡಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಆರತಿ ಕೃಷ್ಣ ತಿಳಿಸಿದರು.
‘ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ವ್ಯಾಸಂಗ ಮಾಡುತ್ತಿದ್ದ ಸಾಕೇತ್, ಕಾಣೆಯಾಗುವ ಹಿಂದಿನ ದಿನ ಸ್ನೇಹಿತರ ಜತೆ ಊಟ ಮಾಡಿದ್ದಾನೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.