ADVERTISEMENT

ಸಂಪತ್‌ ರಾಜ್ ಪರಾರಿ: ವೈದ್ಯರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 19:42 IST
Last Updated 2 ನವೆಂಬರ್ 2020, 19:42 IST
ಸಂಪತ್‌ ರಾಜ್‌
ಸಂಪತ್‌ ರಾಜ್‌   

ಬೆಂಗಳೂರು: ಆಸ್ಪತ್ರೆಯಿಂದ ಪರಾರಿಯಾಗಿರುವ ಕಾಂಗ್ರೆಸ್ ಮುಖಂಡ ಆರ್. ಸಂಪತ್‌ ರಾಜ್ ಪತ್ತೆಗೆ ಹುಡುಕಾಟ ಮುಂದುವರಿದಿದ್ದು, ಆತ ಪರಾರಿಯಾಗಲು ಸಹಕರಿಸಿದ್ದ ಆರೋಪದಡಿ ಖಾಸಗಿ ಆಸ್ಪತ್ರೆಯ ವೈದ್ಯರನ್ನು ಸಿಸಿಬಿ ಪೊಲೀಸರು ಸೋಮವಾರ ವಿಚಾರಣೆಗೆ ಒಳಪಡಿಸಿದರು.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದ ಪ್ರಕರಣ ಪ್ರಮುಖ ಆರೋಪಿಯಾಗಿರುವ ಸಂಪತ್‌ರಾಜ್, ಆಸ್ಪತ್ರೆಯಿಂದ ಬಿಡುಗಡೆಯಾಗಿ ಪರಾರಿಯಾಗಿದ್ದಾರೆ. ಮುಂಚಿತವಾಗಿಯೇ ನೋಟಿಸ್ ನೀಡಿದ್ದರೂ ಅವರ ಬಿಡುಗಡೆ ಬಗ್ಗೆ ವೈದ್ಯರು ಪೊಲೀಸರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ.

ವೈದ್ಯರ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ವೈದ್ಯರಿಗೆ ಹಾಗೂ ಸಿಬ್ಬಂದಿ ನೋಟಿಸ್ ನೀಡಿದ್ದರು.

ADVERTISEMENT

ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬಂದಿದ್ದ ವೈದ್ಯರು ಹಾಗೂ ಸಿಬ್ಬಂದಿ ವಿಚಾರಣೆಗೆ ಒಳಪಟ್ಟರು. ಡಿಸಿಪಿ ರವಿಕುಮಾರ್ ಹಾಗೂ ಎಸಿಪಿ ವೇಣುಗೋಪಾಲ್ ನೇತೃತ್ವದ ತಂಡ, ಅವರೆಲ್ಲರ ಹೇಳಿಕೆ ಪಡೆದು ವಾಪಸು ಕಳುಹಿಸಿತು.

‘ಕೊರೊನಾ ಸೋಂಕಿತರಾಗಿ ಬಂದಿದ್ದ ಸಂಪತ್‌ ರಾಜ್‌ಗೆ ಚಿಕಿತ್ಸೆ ನೀಡಿದೆವು. ಒಮ್ಮೆ ಬಿಡುಗಡೆಯಾಗಿ ಹೋಗಿದ್ದ ಅವರು, ಎರಡನೇ ಬಾರಿ ಪುನಃ ಬಂದು ಆಸ್ಪತ್ರೆಗೆ ದಾಖಲಾದರು. ಲಕ್ಷಣಗಳು ಇವೆಯೆಂದು ಹೇಳಿದ್ದರಿಂದ ಚಿಕಿತ್ಸೆ ಮುಂದುವರಿಸಿದೆವು. ಇತ್ತೀಚೆಗೆ ಗುಣಮುಖವಾದ ಬಗ್ಗೆ ವರದಿ ಕೊಟ್ಟಿದೆವು. ಅವರೇ ಅವಸರದಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಆಗಿ ಹೋಗಿದ್ದಾರೆ. ಬಿಡುಗಡೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಚಿಕಿತ್ಸೆ ನೀಡುವುದಷ್ಟೇ ನಮ್ಮ ಕೆಲಸ. ರೋಗಿ ದಾಖಲು ಹಾಗೂ ಬಿಡುಗಡೆಗೆ ಬೇರೆ ಸಿಬ್ಬಂದಿ ಇದ್ದಾರೆ’ ಎಂದು ವೈದ್ಯರು ಹೇಳಿರುವುದಾಗಿ ಗೊತ್ತಾಗಿದೆ.

ಸಹೋದರಿ ಪತಿ ವಿಚಾರಣೆ: ಸಂಪತ್ ರಾಜ್ ಸಹೋದರಿಯ ಪತಿ ಬಾಲಕೃಷ್ಣ ಎಂಬುವರನ್ನೂ ಪೊಲೀಸರು ವಿಚಾರಣೆ ನಡೆಸಿದರು. ಸಂಪತ್‌ ರಾಜ್‌ ಜೊತೆಗಿನ ಒಡನಾಟ ಹಾಗೂ ಅವರ ಆಪ್ತರ ಬಗ್ಗೆಯೂ ಬಾಲಕೃಷ್ಣ ಅವರಿಂದ ಮಾಹಿತಿ ಪಡೆದುಕೊಂಡು ವಾಪಸು ಕಳುಹಿಸಲಾಗಿದೆ.

‘ಡಿ.ಕೆ ನೆರವಿನಿಂದ ಸಂಪತ್‌ರಾಜ್ ಪರಾರಿ’

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಸಹಕಾರದಿಂದಲೇ ಡಿ.ಜೆ.ಹಳ್ಳಿ ಗಲಭೆಯ ಪ್ರಮುಖ ಆರೋಪಿ ಸಂಪತ್‌ ರಾಜ್‌ ಪರಾರಿಯಾಗಿದ್ದಾರೆ ಎಂದು ಬಿಜೆಪಿ ದೂರಿದೆ.

‘ಗಲಭೆಯ ಆರೋಪಿಯನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಿಸಿದ್ದು ಕಾಂಗ್ರೆಸ್‌ ಪಕ್ಷದ ಸೋಗಲಾಡಿತನಕ್ಕೆ ಉದಾಹರಣೆಯಾಗಿದೆ. ಕಾಂಗ್ರೆಸ್ಸಿಗರೇ, ದಲಿತ ಶಾಸಕನ ಮನೆ ಸುಟ್ಟ ಆರೋಪಿಯನ್ನು ನೀವೇಕೆ ರಕ್ಷಿಸುತ್ತಿದ್ದೀರಿ’ ಎಂದು ಬಿಜೆಪಿ ಟ್ವೀಟ್ ಮೂಲಕ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.