ADVERTISEMENT

ಬೆಂಗಳೂರು | ಕಲಾವಿದರ ಧನಸಹಾಯ ವಿಸ್ತರಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 20:53 IST
Last Updated 1 ಆಗಸ್ಟ್ 2020, 20:53 IST

ಬೆಂಗಳೂರು: ಕೋವಿಡ್ ಸಂಕಷ್ಟದಲ್ಲಿರುವ ಕಲಾವಿದರಿಗೆ ₹2 ಸಾವಿರ ಧನಸಹಾಯವನ್ನು ಇನ್ನೂ ಆರು ತಿಂಗಳು ನೀಡಬೇಕು ಎಂದು ಸಮುದಾಯ ಕರ್ನಾಟಕ ಸಂಸ್ಥೆ ಒತ್ತಾಯಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಅವರನ್ನು ಸಮುದಾಯ ರಾಜ್ಯ ಸಮಿತಿ ಉಪಾಧ್ಯಕ್ಷ ಟಿ. ಸುರೇಂದ್ರರಾವ್, ಸಹ ಕಾರ್ಯದರ್ಶಿ ಜೆ.ಸಿ. ಶಶಿಧರ್, ಸದಸ್ಯ ಪುರುಷೋತ್ತಮ ಕಲಾಲಬಂಡಿ ಮತ್ತು ವೆಂಕಟೇಶ ಪ್ರಸಾದ್ ಒಳಗೊಂಡ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.

‘ಕಷ್ಟದಲ್ಲಿರುವ ಕಲಾವಿದರಿಗೆ ನಿರ್ದಿಷ್ಟ ನಿಯಮಗಳ ಆಧಾರದಲ್ಲಿ ಧನಸಹಾಯ ನೀಡಲಾಗಿದೆ. ಸಮುದಾಯದ ಮನವಿಯಂತೆ ಈ ಯೋಜನೆಯನ್ನು ಇನ್ನೂ ಆರು ತಿಂಗಳ ಅವಧಿಗೆ ವಿಸ್ತರಿಸಲು ಪ್ರಯತ್ನಿಸಲಾಗುವುದು ಎಂದು ರಂಗಪ್ಪ ತಿಳಿಸಿದ್ದಾರೆ. ಸಹಾಯಧನ ಸಿಗದಿದ್ದವರು ಗಮನಕ್ಕೆ ತಂದರೆ ಪರಿಶೀಲಿಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ’ ಎಂದು ಸಮುದಾಯದ ಪ್ರಧಾನ ಕಾರ್ಯ‌ದರ್ಶಿ ಎಸ್. ದೇವೇಂದ್ರಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಕೆಲ ಕಲಾವಿದರು ಮರಣ ಹೊಂದಿದ ಮೇಲೂ ಮಾಸಾಶನ ವಿತರಣೆಯಾಗುತ್ತಿದ್ದ ಕಾರಣ ಅದನ್ನು ತಡೆಯಲು ಎಲ್ಲಾ ಕಲಾವಿದರಿಗೂ ತಮ್ಮ ದಾಖಲೆ ಪತ್ರಗಳನ್ನು ಸಲ್ಲಿಸಬೇಕೆಂದು ತಿಳಿಸಲಾಗಿತ್ತು. ಮಾಸಾಶನಕ್ಕೆ ಅರ್ಹರಾದ ಕಲಾವಿದರು ಇ–ಮೇಲ್‌ ಅಥವಾ ವಾಟ್ಸ್‌ಆ್ಯಪ್‌ನಲ್ಲಿ ಸಲ್ಲಿಸಬಹುದು ಎಂದೂ ಮಾಹಿತಿ ನೀಡಿದ್ದಾರೆ’ ಎಂದು ವಿವರಿಸಿದ್ದಾರೆ.

‘ದೆಹಲಿ ಜೆಎನ್ಯು. ಕನ್ನಡ ಪೀಠದ ನಿರ್ದೇಶಕರ ಅವಧಿ ಸದ್ಯ ಮುಗಿಯುತ್ತಿದ್ದು, ಹೊಸ ನಿರ್ದೇಶಕರನ್ನು ನೇಮಕ ಮಾಡಿ ಕನ್ನಡ ಪೀಠವನ್ನು ಜೀವಂತವಾಗಿ ಇಡಲು ಮನವಿ ಸಲ್ಲಿಸಲಾಯಿತು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.